ಹುಬ್ಬಳ್ಳಿ: ಸಹಕಾರದಿಂದಲೇ ಸಂಘಗಳು ಬೆಳೆಯಲು ಸಾಧ್ಯ. ಪ್ರಾಮಾಣಿಕತೆ, ನಿರಂತರ ಶ್ರಮ ಮತ್ತು ದಕ್ಷತೆಯಿಂದ ಸಹಕಾರ ಸಂಘಟನೆಗಳು ಬೆಳೆದು ಬಂದಿವೆ ಎಂದು ಬಾಳೆಹೊನ್ನೂರು ಡಾ. ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಇಲ್ಲಿಯ ವಿದ್ಯಾನಗರದ ಶ್ರೀ ಜಗದ್ಗುರು ರಂಭಾಪುರಿ ವೀರಗಂಗಾಧರ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಕೋ-ಆಪ್ ಕ್ರೆಡಿಟ್ ಸೊಸೈಟಿ ರಜತ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಆರ್ಥಿಕವಾಗಿ ಎಲ್ಲರೂ ಬಲಾಢ್ಯರಾಗಬೇಕೆಂದು ಬಯಸುವುದು ಸಹಜ. ಈ ದಿಸೆಯಲ್ಲಿ ನಿರಂತರ ಪ್ರಯತ್ನ ಮತ್ತು ಸಾಧನೆಯಿಂದ ಉನ್ನತಿ ಪಡೆಯಲು ಸಾಧ್ಯ. 1997ರಲ್ಲಿ ಪ್ರಾರಂಭಗೊಂಡ ಸಂಘ ಇಂದು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತೋಷದ ಸಂಗತಿ. ಎಲ್ಲ ಸದಸ್ಯರು ಪರಸ್ಪರ ತಿಳಿವಳಿಕೆಯಿಂದ ಸಹಕಾರ ಸಂಘ ಇನ್ನಷ್ಟು ಬೆಳೆಸುವುದರ ಜತೆಗೆ ಆರ್ಥಿಕವಾಗಿ ದುರ್ಬಲ ಜನ ಸಮುದಾಯವನ್ನು ಮೇಲೆತ್ತುವ ಕಾರ್ಯ ಮಾಡಬೇಕೆಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಿಂದೆಂದಿಗಿಂತ ಇಂದು ಸಹಕಾರ ಸಂಘಗಳು ಬಲಾಢ್ಯವಾಗಿ ಬೆಳೆಯುತ್ತಿವೆ. ಜಗದ್ಗುರು ರೇಣುಕಾಚಾರ್ಯರ ಹೆಸರಿನಲ್ಲಿ ಪ್ರಾರಂಭಗೊಂಡ ಸಹಕಾರ ಸಂಘ ಅನೇಕ ಏಳು ಬೀಳುಗಳನ್ನು ಕಂಡು ಇಂದು ಉನ್ನತಿಯತ್ತ ಮುನ್ನಡೆಯುತ್ತಿರುವುದು ಸದಸ್ಯರ ಪರಿಶ್ರಮದ ಸತ್ಪಲವೆಂದರು.
ಸುಳ್ಳದ ಶಿವಸಿದ್ಧರಾಮೇಶ್ವರ ಶ್ರೀಗಳು, ಶಿರಕೋಳ ಗುರುಸಿದ್ಧೇಶ್ವರ ಶ್ರೀಗಳು, ಅಮ್ಮಿನಭಾವಿ ಅಭಿನವ ಶಾಂತಲಿಂಗ ಶ್ರೀಗಳು, ನರಗುಂದ ಸಿದ್ಧಲಿಂಗ ಶ್ರೀಗಳು, ಸಹಕಾರ ಕ್ಷೇತ್ರದ ಹಿರಿಮೆ ಕೊಂಡಾಡಿದರು.
ನಿವೃತ್ತ ಡಿಡಿಪಿಐ ರುದ್ರಪ್ಪ ಹಲಗತ್ತಿ, ವಾಣಿಜ್ಯ ತೆರಿಗೆ ಅಧಿಕಾರಿ ಶಿವಲೀಲಾ ಅಂಗಡಿ, ಸಹಕಾರಿ ಅಭಿವೃದ್ಧಿ ಅಧಿಕಾರಿಗಳಾದ ಆರ್.ಟಿ. ಪೋಳ್, ಎ.ಎಂ. ಮುಶಾಪುರಿ, ಸವಿತಾ ರಮೇಶ ಪಾತ್ರೋಟಿ, ಪ್ರಕಾಶ ಬೆಂಡಿಗೇರಿ, ವಿಶ್ವನಾಥ ಹಿರೇಗೌಡರ ಅವರಿಗೆ ಗೌರವ ಗುರುರಕ್ಷೆ ನೀಡಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಸೊಸೈಟಿ ಅಧ್ಯಕ್ಷ ಶಿವಪುತ್ರಪ್ಪ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.
ದೀಪಾ ಪಟ್ಟಣಶೆಟ್ಟಿ ಸ್ವಾಗತಿಸಿದರು. ವಿಜಯ ಜಲ್ಲಿ ಹಾಗೂ ಗದಿಗೆಯ್ಯ ಹಿರೇಮಠ ನಿರೂಪಿಸಿದರು. ಉಮೇಶ ಅಂಗಡಿ ವಂದಿಸಿದರು.