ಭದ್ರಾವತಿ: ಸಮಾಜದ ನೆರವು ಹಾಗೂ ಆಶ್ರಯ ಪಡೆದು ಬೆಳೆದವರು ಅಶಕ್ತರಾದವರಿಗೆ ಶಕ್ತಿ ತುಂಬಿಸುವ ಕೆಲಸ ಮಾಡಬೇಕು. ಅವರನ್ನು ಮುಖ್ಯವಾಹಿನಿ ಕರೆತಂದು ಸಂಘಟಿತರಾಗಿಸಿದರೆ ಸಮಾಜದ ಶಕ್ತಿ ತನ್ನಷ್ಟಕ್ಕೆ ತಾನೇ ಹೆಚ್ಚಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಹಳೇನಗರದ ವೀರಶೈವ ಸಭಾಭವನದಲ್ಲಿ ಭಾನುವಾರ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಉಡಿ ತುಂಬುವ ಕಾರ್ಯಕ್ರಮ, ಹಿರಿಯ ಸದಸ್ಯರಿಗೆ ಗೌರವಾರ್ಪಣೆ ಹಾಗೂ ಸಮಾಜದ ನೌಕರ ವರ್ಗಕ್ಕೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹಲವು ಮಹಾನ್ ವ್ಯಕ್ತಿಗಳ ಹಿಂದೆ ಒಂದಷ್ಟು ಜನರ ಸಹಕಾರ ಇದ್ದ ಕಾರಣದಿಂದಲೆ ಸರ್ ಎಂ.ವಿಶ್ವೇಶ್ವರಯ್ಯ ಅವರು ಶಿಕ್ಷಣ ಪಡೆದು ಅಗ್ರಗಣ್ಯ ಇಂಜಿನಿಯರ್ ಆಗಲು ಸಾಧ್ಯವಾಯಿತು. ಜಲಾಶಯ, ಕಾರ್ಖಾನೆಗಳ ಸ್ಥಾಪನೆಯಿಂದಾಗಿ ಸಾವಿರಾರು ರೈತರು, ಕಾರ್ಮಿಕರ ಬದುಕು ಹಸನಾಯಿತು. ಬಡವರಿಗೆ ಶಿಕ್ಷಣ, ಸಂಸ್ಕಾರ ಕೊಟ್ಟ ಸಿದ್ದಗಂಗಾ ಮಹಾಸ್ವಾಮಿಗಳ ಆರ್ಶೀವಾದದಿಂದ ಸಾಕಷ್ಟು ಮಕ್ಕಳು ವಿದ್ಯಾವಂತರಾಗಿ ದೇಶದೆಲ್ಲೆಡೆ ಬದುಕು ರೂಪಿಸಿಕೊಳ್ಳಲು ಸಾಧ್ಯವಾಯಿತು. ಸಮಾಜದಲ್ಲಿ ಸಹಾಯ ಮಾಡುವ ಪ್ರವೃತ್ತಿ ಬೆಳೆಸಿಕೊಂಡಾಗ ಹಣ, ಗೌರವ ತನ್ನಷ್ಟಕ್ಕೆ ತಾನೇ ಬರುತ್ತದೆ ಎಂದರು.
ಶಾಸಕ ಬಿ.ಕೆ.ಸಂಗಮೇಶ್ವರ್, ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿತ ಭಾರತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಜಿ.ಸುರೇಶಯ್ಯ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಆಯನೂರು ಮಂಜುನಾಥ್, ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ್ ಸಾಗರನಹಳ್ಳಿ, ಜಿಲ್ಲಾಧ್ಯಕ್ಷ ರುದ್ರಮುನಿ ಎನ್.ಸಜ್ಜನ್, ಮಂಗೋಟೆ ರುದ್ರೇಶ್, ನಗರಸಭೆ ಅಧ್ಯಕ್ಷೆ ಗೀತಾರಾಜ್ಕುಮಾರ್, ಬಿ.ಸಿದ್ದಬಸಪ್ಪ, ಎಚ್.ಎಲ್ ಷಡಕ್ಷರಿ, ಡಾ. ಬಿ.ಜಿ.ಧನಂಜಯ್ ಸೇರಿದಂತೆ ಹಲವರಿದ್ದರು. ಸಚಿವ ಜೆ.ಸಿ.ಮಾಧುಸ್ವಾಮಿ ನೆರೆ ಸಂತ್ರಸ್ತರಿಗೆ 50 ಸಾವಿರ ರೂ. ಪರಿಹಾರದ ಚೆಕ್ ತಾಲೂಕು ಕಚೇರಿ ಅಧಿಕಾರಿ ಮಂಜಾನಾಯ್ಕ ಅವರಿಗೆ ನೀಡಿದರು.