ಕಲಬುರಗಿ: ಬುದ್ಧಿ ಬೆಳೆದಷ್ಟು ಭಾವನೆಗಳು ಬೆಳೆಯುತ್ತಿಲ್ಲ. ಬೆಟ್ಟದಷ್ಟು ಸಂಪತ್ತು ಇದ್ದರೂ ಶಾಂತಿಯಿಲ್ಲ. ಕೆಟ್ಟ ಮಾರ್ಗ ಹಿಡಿದವರನ್ನು ಕೈ ಹಿಡಿದು ಸತ್ಪಥದೆಡೆಗೆ ಕರೆದೊಯ್ಯುವುದೇ ನಿಜವಾದ ಗುರುವಿನ ಪರಮ ಕರ್ತವ್ಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತೆಲಂಗಾಣದ ಕೊಲನಪಾಕ್ನ ಶ್ರೀ ಸ್ವಯಂಭು ಸೋಮೇಶ್ವರ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಇಷ್ಟಲಿಂಗ ಮಹಾಪೂಜಾ ಹಾಗೂ 64ನೇ ವರ್ಷದ ಜನ್ಮ ದಿನೋತ್ಸವ ಧರ್ಮ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ನಮ್ಮ ದೇಶದಲ್ಲಿ ನೀರು, ಗಾಳಿ, ಆಹಾರ ಕೆಟ್ಟಿಲ್ಲ. ಆದರೆ ಮನುಷ್ಯನ ಮನಸ್ಸುಗಳು ಕೆಟ್ಟಿವೆ. ಸ್ವಾರ್ಥ ಸಂಕುಚಿತ ಭಾವನೆಯಿಂದ ಬದುಕು ಅಸ್ತವ್ಯಸ್ತಗೊಂಡಿದೆ. ಹೂದೋಟದ ಹೂಗಳು ಎಲ್ಲರಿಗೂ ಸುವಾಸನೆ ಕೊಡುತ್ತವೆ. ಹೂದೋಟದೊಳಗೆ ಹೋಗಿ ಬಂದ ಮನುಷ್ಯ ಪರಿವರ್ತನೆ ಆಗಬೇಕು. ಮರ ಎಷ್ಟೇ ಎತ್ತರಕ್ಕೆ ಬೆಳೆದರೂ ಬೇರು ಅವಶ್ಯಕ. ಮನುಷ್ಯ ಎಷ್ಟೇ ಬೆಳೆದು ಬಲಗೊಂಡರೂ ನಮ್ಮ ಸಂಸ್ಕೃತಿ ಮರೆಯಬಾರದು ಎಂದರು.
ಶಿವಗಂಗಾ ಕ್ಷೇತ್ರದ ಮಲಯ ಶಾಂತಮುನಿ ಶ್ರೀ, ಎಮ್ಮಿಗನೂರು ವಾಮದೇವ ಮಹಂತ ಶ್ರೀ, ಮೇಹಕರ ರಾಜೇಶ್ವರ ಶ್ರೀ, ಬಿಚಗುಂದ ಸೋಮಲಿಂಗ ಶ್ರೀ, ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ, ಎಡೆಯೂರು, ಸುಳ್ಳ, ಸಿದ್ಧರಬೆಟ್ಟ, ಅಮ್ಮಿನಭಾವಿ, ನೆಗಳೂರು, ಬೇರುಗಂಡಿ, ಮೈಸೂರು ಸೇರಿ 50ಕ್ಕೂ ಹೆಚ್ಚು ಮಠಾಧೀಶರು ಉಪಸ್ಥಿತರಿದ್ದರು. ಪಾಳಾ ಗುರುಮೂತರ್ಿ ಶ್ರೀ ಸ್ವಾಗತಿಸಿದರು. ಶಿಕ್ಷಕ ರಮೇಶ ರಾಜೋಳಿ ನಿರೂಪಣೆ ಮಾಡಿದರು.