ವಿಜಯಪುರ: ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಚಿವೆ ಶಶಿಕಲಾ ಜೊಲ್ಲೆಗೆ ಸ್ವಾತಂತ್ರ್ಯ ಉತ್ಸವದ ವೇಳೆ ಪ್ರತಿಭಟನೆ ಬಿಸಿ ತಟ್ಟಿದೆ.
ಇಲ್ಲಿನ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿವಿಯಲ್ಲಿ ಭಾನುವಾರ ಜಿಲ್ಲಾಡಳಿಯ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ಉತ್ಸವ ಅಮೃತೋತ್ಸವ ವೇಳೆ ಧಿಕ್ಕಾರದ ಸದ್ದು ಕೇಳಿ ಬಂದಿದೆ.
ಮುಜರಾಯಿ, ಹಜ್ ಹಾಗೂ ವಕ್ಫ್ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಧ್ವಜಾರೋಹಣಕ್ಕೆ ಆಗಮಿಸುತ್ತಿದ್ದಂತೆ ವಿವಿಧ ಮಹಿಳಾ ಪರ ಸಂಘಟನೆ ಪದಾಧಿಕಾರಿಗಳು ಮೊಟ್ಟೆ ಕಳ್ಳರು, ಭ್ರಷ್ಟಾಚಾರದ ಆರೋಪ ಹೊತ್ತಿರುವವರು ಧ್ವಜಾರೋಹಣ ನಡೆಸಕೂಡದು ಎಂದು ಆಗ್ರಹಿಸಿದರು.
ಕಪ್ಪು ಬಟ್ಟೆ ಪ್ರದರ್ಶನ ಮಾಡಿ, ಮೊಟ್ಟೆ ಕಳ್ಳಿಗೆ ಬಸವನಾಡಿನಲ್ಲಿ ಧ್ವಜಾರೋಹಣಕ್ಕೆ ಅವಕಾಶ ಕೊಡಲ್ಲ ಎಂದು ಆಗ್ರಹಿಸಿದರು.
ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ಕೇಳಿ ಬಂದ ಧಿಕ್ಕಾರದ ಸದ್ದು ಹಾಗೂ ಪ್ರತಿಭಟನೆ ಹಾವಳಿಗೆ ಸಚಿವೆ ಜೊಲ್ಲೆ ಸಹಿತ ಪೊಲೀಸ್ ಇಲಾಖೆ ಕ್ಷಣ ಕಾಲ ದಂಗಾಗಬೇಕಾಯಿತು.
ಕೂಡಲೇ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಬಳಿಕ ಶಶಿಕಲಾ ಜೊಲ್ಲೆ ಧ್ವಜಾರೋಹಣಕ್ಕೆ ತೆರಳಿದರು.