ಬೆಳಗಾವಿ: ವೈಯಕ್ತಿಕ ಪ್ರಜ್ಞೆಗಿಂತ ಸಮೂಹ ಪ್ರಜ್ಞೆ ನಮ್ಮ ಆದ್ಯತೆಯಾಗಬೇಕು. ಅದು ಬಹು ಧರ್ಮ, ಬಹು ಸಂಸ್ಕೃತಿಗಳ ನಮ್ಮ ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಬಲ್ಲದು ಎಂದು ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಶಂಕರ ಬಾಗೇವಾಡಿ ಅಭಿಪ್ರಾಯ ಪಟ್ಟರು.
ನಗರದ ರಾಣಿ ಪಾರ್ವತಿದೇವಿ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ’ಕನ್ನಡ ವಿಭಾಗ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುವ ಸಮೂಹದ ಶಿಕ್ಷಣದ ಮಟ್ಟ ಹಾಗೂ ಉದ್ಯೋಗಾವಕಾಶಗಳ ಲಭ್ಯತೆಯ ಮೇಲೆ ಒಂದು ದೇಶದ ಭವಿಷ್ಯ ನಿಂತಿದೆ. ಯುವಕರು ಗುಂಪಿನಲ್ಲಿ ಗೋವಿಂದನಾಗದೇ ಸ್ವ-ಆಲೋಚನಾ ಶಕ್ತಿ ಪಡೆದುಕೊಳ್ಳಬೇಕು. ಶಿಕ್ಷಣದ ಮೂಲ ಉದ್ದೇಶ ಜ್ಞಾನ ಸಂಪಾದನೆಯೊಂದಿಗೆ ಜೀವನದ ಆರ್ಥಿಕ ಭದ್ರತೆ ಒದಗಿಸುವುದೇ ಆಗಿದೆ ಎಂದರು. ಕಾಲೇಜಿನ ಪ್ರಾಚಾರ್ಯೆ ಅನುಜಾ ನಾಯಕ ಮಾತನಾಡಿ, ನಮ್ಮ ದೇಶ ಬಹು ಭಾಷೆ, ಬಹು ಧರ್ಮ, ಬಹು ಸಂಸ್ಕೃತಿಗಳಿಂದ ಕೂಡಿದ್ದು, ಆ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲಿ ಬಹುಭಾಷಾ ವಿಭಾಗಗಳ ದಿನ ಆಚರಿಸುತ್ತಿದೆ. ಪ್ರಸ್ತುತ ಕನ್ನಡ ವಿಭಾಗ ದಿನವನ್ನು ಆಚರಿಸುವ ಮೂಲಕ ಯುವಕರ ಮನಸ್ಸು ವಿಸ್ತಾರವಾಗಲಿ ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್. ಬಿ. ಕೋಲ್ಕಾರ, ಡಾ. ಅಭಯ ಪಾಟೀಲ, ಪ್ರೊ. ರಾಜೇಂದ್ರ ಪವಾರ, ಡಾ. ಸಿ.ಎಂ. ಮುನ್ನೊಳಿ, ಪ್ರೊ. ಪ್ರಸನ್ನ ಜೋಶಿ ಇತರರಿದ್ದರು.