ಸೇಡಂ (ಕಲಬುರಗಿ) : ತಾಲೂಕು ಆಸ್ಪತ್ರೆಯ ತಜ್ಞ ವೈದ್ಯರೊಬ್ಬರೂ ಅನಧಿಕೃತವಾಗಿ ಗೈರಾಗಿದ್ದರಿಂದ ಹೊರ ರೋಗಿಗಳು ಪರದಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಗುರುವಾರ (ಆ.4) ಆಸ್ಪತ್ರೆಗೆ ಬಂದ ಹೊರ ರೋಗಿಗಳಿಗೆ ಇಎನ್ಟಿ ತಜ್ಞ ವೈದ್ಯರ ಬಳಿ ತಪಾಸಣೆಗೆ ಚೀಟಿ ನೀಡಲಾಗಿದೆ. ಆದರೆ ಅಂದು ವೈದ್ಯರು ಆಸ್ಪತ್ರೆಗೆ ಬಂದಿಲ್ಲ. ಈ ಬಗ್ಗೆ ಕೇಳಿದಾಗ ನಾಳೆ ಬರುತ್ತಾರೆ ಬನ್ನಿ ಎಂದು ಹೇಳಿ ವಾಪಸ್ ಕಳಿಸಿದ್ದಾರೆ. ಮರುದಿನ ಮಧ್ಯಾಹ್ನ 1ಗಂಟೆಯಾದರೂ ವೈದ್ಯರೂ ಆಸ್ಪತ್ರೆಯತ್ತ ಸುಳಿದಿಲ್ಲ. ಇದರಿಂದ ಆಕ್ರೋಶಗೊಂಡ ರೋಗಿಗಳು ಆಡಳಿತ ವೈದ್ಯಾಧಿಕಾರಿ ಬಳಿಗೆ ಹೋಗಿ ಪ್ರಶ್ನಿಸಿದ್ದಾರೆ. ಅವರು ವೈದ್ಯರು ಗೈರಾಗಿರುವುದು ನಮ್ಮ ಸಿಬ್ಬಂದಿಗೆ ಗೊತ್ತಾಗಿಲ್ಲ. ಹೀಗಾಗಿ ತಪಾಸಣೆಯ ಚೀಟಿ ನೀಡಿದ್ದಾರೆ ಎಂದು ಸಮಾಜಾಯಿಸಿ ನೀಡಿದ್ದಾರೆ.
ಒಬ್ಬ ಜವಾಬ್ದಾರಿಯುತ ವೈದ್ಯರಾದವರೂ ಸರಿಯಾಗಿ ಆಸ್ಪತ್ರೆಗೆ ಬರಬೇಕು. ಹಾಸ್ಪಿಟಲ್ಗೆ ಬರಲು ಆಗದಿದ್ದರೆ ಕೊನೆಗೆ ರಜೆ ಪತ್ರವನ್ನಾದರೂ ನೀಡಬೇಕು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಮಗಳಿಗೆ ಕಿವಿಯಲ್ಲಿ ಸಮಸ್ಯೆಯಾಗಿದ್ದು, ತಪಾಸಣೆಗಾಗಿ ಗುರುವಾರ ಸೇಡಂ ಸರ್ಕಾರಿ ಆಸ್ಪತ್ರೆಗೆ ಬಂದಿದ್ದೆ. ಅಂದು ತಜ್ಞ ವೈದ್ಯರು ಹಾಸ್ಪಿಟಲ್ನಲ್ಲಿ ಇಲ್ಲದಿದ್ದರೂ ಸಿಬ್ಬಂದಿ ತಪಾಸಣೆಗೆ ಚೀಟಿ ನೀಡಿದ್ದಾರೆ. ಕೆಲ ಸಮಯ ಕಾದು ಕೇಳಿದಾಗ ಬಂದಿಲ್ಲ ಎಂದು ಉತ್ತರಿಸುತ್ತಾರೆ. ಸಿಬ್ಬಂದಿ ಹಾಗೂ ವೈದ್ಯರ ನಿರ್ಲಕ್ಷದಿಂದಾಗಿ ಜನರು ಪರದಾಡುವಂತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿ ಸೂಕ್ತ ಸೇವೆ ನೀಡಲು ಕ್ರಮ ಕೈಗೊಳ್ಳಬೇಕು.
| ಸಿದ್ದಲಿಂಗಯ್ಯಸ್ವಾಮಿ ಮಲಕೂಡ, ರಂಗಕರ್ಮಿ