ಸೇಡಂ: ಸನಾತನ ಧರ್ಮಕ್ಕೆ ತನ್ನದೇ ಆದ ಇತಿಹಾಸವಿದ್ದು, ಕೆಲವರು ಧರ್ಮದ ವಿರುದ್ಧ ಮಾತನಾಡಿ ಹೆಸರು ಗಿಟ್ಟಿಸಿಕೊಳ್ಳುವ ಕೆಟ್ಟ ಚಾಳಿ ಬೆಳೆಸಿಕೊಂಡಿದ್ದಾರೆ. ಅಂತವರಿಗೆ ಪಾಠ ಕಲಿಸಲು ಹಿಂದೂಗಳು ಒಗ್ಗೂಡಬೇಕಾಗಿದೆ ಎಂದು ಬೆಳಗಾವಿಯ ಖ್ಯಾತ ವಾಗ್ಮಿ ವೈಭವಿ ಕುಲಕರ್ಣಿ ಹೇಳಿದರು.
ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಮಂಗಳವಾರ ರಾತ್ರಿ ಆಯೋಜಿಸಿದ್ದ ಸಿಂಹಘರ್ಜನೆ ಸಮಾವೇಶದಲ್ಲಿ ಮಾತನಾಡಿ, ನಮ್ಮ ಸನಾತನ ಧರ್ಮ, ಸಂಸ್ಕೃತಿ, ಪೂರ್ವಿಕರ ಇತಿಹಾಸ ಮರೆಮಾಚುವ ಕೆಲಸ ಈ ಹಿಂದೆ ವ್ಯವಸ್ಥಿತವಾಗಿ ಮಾಡಲಾಗಿದೆ. ಆದರೆ ಇದೀಗ ಕಾಲ ಬದಲಾಗಿದೆ. ಅದ್ಯಾವುದು ನಡೆಯುತ್ತಿಲ್ಲ. ದಿನ ಕಳೆದಂತೆ ಹಿಂದು ಸಮಾಜ ಒಗ್ಗೂಡುತ್ತಿದೆ. ಇದೆಲ್ಲದರ ಫಲದಿಂದಲೇ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ ಎಂದರು.
ಹಿಂದೆ ಜಗತ್ತಿನ ನಾನಾ ದೇಶಗಳು ನಮ್ಮ ಮೇಲೆ ದಂಡೆತ್ತಿ ಬಂದವು, ಮತಾಂತರ ಮಾಡುವ ಪ್ರಯತ್ನಗಳು ನಡೆದವು. ಆದರೆ ಹಿಂದು ಧರ್ಮವನ್ನು ನಾಶ ಮಾಡಲು ಯಾರಿದಲೂ ಸಾಧ್ಯವಾಗಲಿಲ್ಲ. ಹಿಂದು ಸಾಮಾಜ್ಯ ಸ್ಥಾಪನೆಗಾಗಿ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ. ಶಿವಾಜಿ ಅವತರಿಸದಿದ್ದರೆ ನಾವು ಇನ್ಯಾವುದೋ ಧರ್ಮದಲ್ಲಿ ಇರುತ್ತಿದ್ದೇವು ಎಂದು ಹೇಳಿದರು.
ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಸೇಡಂನ ಹಿಂದು ಮಹಿಳೆಯರು ಜೀಜಾಬಾಯಿಯಂತೆ ಧೈರ್ಯವಂತರಾಗಬೇಕು. ಪ್ರತಿಯೊಬ್ಬರೂ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸುವುದಲ್ಲದೆ, ಅಯೋಧ್ಯೆದಲ್ಲಿ ನಿರ್ಮಾಣವಾದ ಭವ್ಯ ರಾಮಮಂದಿರದ ದರ್ಶನ ಪಡೆಯಬೇಕು ಎಂದರು.
ಶಿವಶAಕರೇಶ್ವರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ಹಾಲಪ್ಪಯ್ಯ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಭೀಮಾಶಂಕರ ಕೊಳ್ಳಿ, ಉಪಾಧ್ಯಕ್ಷ ಸುರೇಶ ಊಡಗಿ, ಕುಮಾರ ಇದ್ದರು.
ಸುಷ್ಮಾ ಕೆ. ಪ್ರಾರ್ಥಿಸಿದರು. ರಾಜು ಭಾಗೋಡಿ ಸ್ವಾಗತಿಸಿದರು. ಶಿವಕುಮಾರ ನಿಡಗುಂದಾ ಪ್ರಾಸ್ತಾವಿಕ ಮಾತನಾಡಿದರು. ಪೂಜಾ ಭಂಕಲಗಿ ನಿರೂಪಣೆ ಮಾಡಿದರು. ಜಗದೀಶ ತಳವಾರ ವಂದಿಸಿದರು.
ಅದ್ದೂರಿ ಮೆರವಣಿಗೆ: ಸೇಡಂನಲ್ಲಿ ಶಿವಾಜಿ ಜಯಂತಿ ನಿಮಿತ್ತ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ಬೆಳಗ್ಗೆ ಚೌರಸ್ತಾ ಬಳಿ ಆಟೋ ರ್ಯಾಲಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಚಾಲನೆ ನೀಡಿದರು. ಪ್ರಮುಖ ಬೀದಿಗಳ ಮೂಲಕ ಬಸ್ ನಿಲ್ದಾಣವರೆಗೂ ಬೃಹತ್ ರ್ಯಾಲಿ ಸಾಗಿತು. ಬಳಿಕ ಮಧ್ಯಾಹ್ನ ೨ಕ್ಕೆ ಶ್ರೀ ಶಿವಾಜಿ ಮಹಾರಾಜರ ಉತ್ಸವ ಮೂರ್ತಿಯೊಂದಿಗೆ ಶೋಭಾಯಾತ್ರೆ ಆರಂಭವಾಯಿತು. ದಾರಿಯುದ್ದಕ್ಕೂ ಜೈ ಶಿವಾಜಿ.. ಜೈ ಭವಾನಿ.. ಸೇರಿ ಹಲವು ಘೋಷಣೆಗಳು ಮೊಳಗಿದವು. ಅಪಾರ ಸಂಖ್ಯೆಯಲ್ಲಿ ಹಿಂದು ಮಾತೆ ಮೆರವಣಿಗೆಯಲ್ಲಿ ಗಮನಸೆಳೆದರು.