ಹುಬ್ಬಳ್ಳಿ: ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಅದರ ವಿರುದ್ಧ ಹೋರಾಡಲು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ವಾಹನ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮಂಗಳವಾರ ಬಂದಿಳಿದಿದ್ದು, ನಿಲ್ದಾಣಕ್ಕೀಗ ಆನೆಬಲ ಬಂದಂತಾಗಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ರೋಸನ್ಬೌರ್ ಬಫೆಲೋ ಕಂಪನಿಯ ವಿಶೇಷ ತಂತ್ರಜ್ಞಾನವುಳ್ಳ ಅಗ್ನಿಶಾಮಕ ವಾಹನವನ್ನು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಉಡುಗೊರೆಯಾಗಿ ನೀಡಿದೆ. ನಿಲ್ದಾಣದ ನಿರ್ದೇಶಕ ಪ್ರಮೋದ ಠಾಕರೆ ಪೂಜೆ ನೆರವೇರಿಸುವ ಮೂಲಕ ವಾಹನಕ್ಕೆ ಚಾಲನೆ ನೀಡಿದರು. ನಿಲ್ದಾಣದ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ನಂತರ ಮಾತನಾಡಿದ ಠಾಕರೆ, ರನ್ ವೇ ಹಾಗೂ ನಿಲ್ದಾಣದಲ್ಲಿ ವಿಮಾನಗಳ ಸುರಕ್ಷತೆಗೆ ಇದು ಅತ್ಯಂತ ಸಹಕಾರಿಯಾಗಲಿದೆ. ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಅಗ್ನಿ ಅವಘಡ ಸಂಭವಿಸಿದರೆ ಕೂಡಲೆ ಹಾಜರಾಗಿ ಬೆಂಕಿ ನಂದಿಸಿ ಸಂಭವನೀಯ ಅನಾಹುತ ತಪ್ಪಿಸುವ ಸಾಮರ್ಥ್ಯವನ್ನು ಈ ವಾಹನ ಹೊಂದಿದೆ ಎಂದು ತಿಳಿಸಿದರು.