ಕಂಪಲಾಪುರ: ಇಪ್ಪತ್ತು ವರ್ಷಗಳ ಬಳಿಕ ಗ್ರಾಮದ ಹೆಗ್ಗರೆ ಕೆರೆ ಭರ್ತಿಯಾಗಿದ್ದು, ಸೋಮವಾರ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು.
ಕೆರೆಗೆ ಶಾಸಕ ಕೆ.ಮಹದೇವ್, ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಇತ್ತೀಚೆಗೆ ಬಾಗಿನ ಅರ್ಪಿಸಲಾಯಿತು. ಗ್ರಾಮದ ಅಧಿದೇವತೆ ಶ್ರೀಕಂಠೇಶ್ವರ, ಕೋಡಿಬಸವೇಶ್ವರ, ಮೂಡಲ ಬಸವೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ಕೆರೆಯ ದಡದಲ್ಲಿ ದಾನಿಯೊಬ್ಬರು ನೀಡಿದ ಬಸವೇಶ್ವರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಸುಮಾರು 5 ಸಾವಿರ ಜನರು ಕೆರೆ ಏರಿ ಮೇಲೆ ನಿಂತು ತೆಪ್ಪೋತ್ಸವ ವೀಕ್ಷಿಸಿದರು. ಬಿಎಂ ರಸ್ತೆಯ ಪಕ್ಕದಲ್ಲಿರುವ ಶ್ರೀ ಭೈರವೇಶ್ವರ ಪೆಟ್ರೋಲ್ ಬಂಕ್ ಆವರಣದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಹುಣಸೂರು ತಾಲೂಕಿನ ಗಾವಡಗೆರೆಯ ನಾಗನಾಯ್ಕ ಹಾಗೂ ತಂಡ ತೆಪ್ಪದ ಉಸ್ತುವಾರಿ ವಹಿಸಿಕೊಂಡಿತ್ತು. ಬಳಿಕ ರಾತ್ರಿ ಶ್ರೀಕಂಠೇಶ್ವರ ಸ್ವಾಮಿಯ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೆರವೇರಿತು.