ಭದ್ರಾವತಿ: ವಿಐಎಸ್ಎಲ್ ಉಳಿಸಿ ಹೋರಾಟ ವೇದಿಕೆಯಿಂದ ಭಾನುವಾರ ರಕ್ತಪತ್ರ ಚಳವಳಿ ನಡೆಸಲಾಯಿತು. ವಿಐಎಸ್ಎಲ್ ಕಾರ್ಖಾನೆ ಮುಚ್ಚಬಾರದು. ಉತ್ಪಾದನೆ ನಿರಂತರವಾಗಿದ್ದು ಕಾರ್ಮಿಕರಿಗೆ ಎಂದಿನಂತೆ ಕೆಲಸ ಸಿಗಬೇಕು. ಎಂದು ಆಗ್ರಹಿಸಿ ಗುತ್ತಿಗೆ ಕಾರ್ಮಿಕರು ವಿವಿಧ ರೀತಿಯ ಹೋರಾಟಗಳನ್ನು ನಡೆಸುತ್ತಿದ್ದು 67ನೇ ದಿನವಾದ ಭಾನುವಾರ ಕಾಗಿನೆಲೆ ಕನಕಗುರುಪೀಠದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ರಕ್ತಪತ್ರ ಚಳವಳಿ ನಡೆಸಿದರು.
ಕಾರ್ಖಾನೆ ಮುಂಭಾಗ ಎಲ್ಲಾ ಗುತ್ತಿಗೆ ಕಾರ್ಮಿಕರು `ಸೇವ್ ವಿಐಎಸ್ಎಲ್-ಸೇವ್ ಭದ್ರಾವತಿ’ ಎಂದು ತಮ್ಮ ರಕ್ತದಲ್ಲಿ ಪ್ರಧಾನಿ ನೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಹೋರಾಟ ನಡೆಸಿದರು.
ಕಾರ್ಮಿಕರ ಈ ಹೋರಾಟವನ್ನು ಬೆಂಬಲಿಸಿ ಮಾತನಾಡಿದ ಶ್ರೀಗಳು, ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಕಳೆದ 67 ದಿನಗಳಿಂದ ಹೋರಾಟ ಮಾಡಿದರೂ ಕಾರ್ಮಿಕರಿಗೆ ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಯಾವುದೇ ಭರವಸೆ ನೀಡದಿರುವುದು ವಿಪರ್ಯಾಸ. ಈ ನಿಟ್ಟಿನಲ್ಲಿ ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ರಕ್ತಪತ್ರ ಚಳವಳಿಗೆ ಮುಂದಾಗಿರುವುದು ಅತ್ಯಂತ ದುರಂತದ ವಿಚಾರ ಎಂದರು.
ಈ ಕಾರ್ಖಾನೆ ಉಳಿಯಬೇಕು, ಆ ಮೂಲಕ ಭದ್ರಾವತಿ ಉಳಿಯಬೇಕು. ಇದರ ಆಶ್ರಯದಲ್ಲಿರುವ ಎಲ್ಲ ಕುಟುಂಬಗಳೂ ಉಳಿಯಬೇಕು ಎಂಬ ನಿಟ್ಟಿನಲ್ಲಿ ಸರ್ಕಾರಗಳು ಪ್ರಯತ್ನಿಸಬೇಕು. ಮತ್ತೊಮ್ಮೆ ಈ ನಾಡಿನ ಎಲ್ಲ ಮಠಾ„ೀಶರು ಬಂದು ನಿಮ್ಮ ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ. ಪ್ರಧಾನಿಗಳನ್ನು ಭೇಟಿ ಮಾಡುತ್ತೇವೆ. ಜೋಳಿಗೆ ಹಿಡಿದು ಹಣ ವಸೂಲಿ ಮಾಡಿ ಈ ಕಾರ್ಖಾನೆ ಉಳಿಸುತ್ತೇವೆ. ಕಾರ್ಮಿಕರು ನಿರಾಶರಾಗುವುದು ಬೇಡÀ ಎಂದು ತಿಳಿಸಿದರು.
ಪ್ರಧಾನಿ ಮಧ್ಯಪ್ರವೇಶಿಸಲಿ: ಮೈಸೂರು ಮಹಾರಾಜರು ಯಾವ ಉದ್ದೇಶವನ್ನಿಟ್ಟುಕೊಂಡು ಈ ಕಾರ್ಖಾನೆಯನ್ನು ಕಟ್ಟಿದ್ದರೋ ಅದರ ಮೂಲ ಉದ್ದೇಶವನ್ನು ಇಂದು ಸರ್ಕಾರಗಳು ಮರೆತಂತಿದೆ. ಸಾವಿರಾರು ಕಾರ್ಮಿಕರು ಬೀದಿಪಾಲಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ನಾಡು ಕಟ್ಟುವಲ್ಲಿ ಕಾರ್ಮಿಕರ ಪಾತ್ರ ದೊಡ್ಡದು ಎಂಬುದನ್ನು ತಿಳಿಯಬೇಕಾಗಿದೆ. ನಮ್ಮ ದೇಶಕ್ಕೆ ಬಡತನವಿಲ್ಲ. ಸಂಪದ್ಭÀಭರಿತ ದೇಶವಿದು. ಪ್ರಧಾನಿ ಮೋದಿ ಅವರು ಮಧ್ಯ ಪ್ರವೇಶಿಸಿ ಅಗತ್ಯ ಬಂಡವಾಳ ಹೂಡುವ ಮೂಲಕ ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸಿ, ಕಾರ್ಮಿಕರ ಕಲ್ಯಾಣಕ್ಕೆ ಮುಂದಾಗಬೇಕು ಎಂದು ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.