ತೂಬಗೆರೆ: ದೊಡ್ಡಬಳ್ಳಾಪುರ ತಾಲೂಕು ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೂಬಗೆರೆಯಲ್ಲಿನ ದೇವರಾಜ ಅರಸು ಹಿಂದುಳಿದ ಕಲ್ಯಾಣ ಬಾಲಕರ ವಿದ್ಯಾರ್ಥಿನಿಲಯ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಕೆಡವಿ ನೂತನವಾಗಿ ಕಟ್ಟಡ ನಿರ್ಮಾಣ ಸಂಬಂಧ ಉಸ್ತುವಾರಿ ಸಚಿವರ ಗಮನ ಸೆಳೆಯಲಾಗುವುದು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಭರವಸೆ ನೀಡಿದರು.
ತೂಬಗೆರೆ ವಸತಿ ಶಾಲೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕರು ಕಟ್ಟಡ ಪರಿಶೀಲಿಸಿ ಮಾತನಾಡಿದರು. ಕಟ್ಟಡ ನಿರ್ಮಾಣವಾಗಿ 20 ವರ್ಷಗಳಲ್ಲೇ ಶಿಥಿಲಗೊಂಡಿದೆ, ಗುಣಮಟ್ಟ ಕಳಪೆಯಾಗಿರುವುದೇ ಇದಕ್ಕೆ ಕಾರಣ. ಕಟ್ಟಡ ಯಾವಾಗಬೇಕಾದರೂ ಕುಸಿಯಬಹುದು ಎಂಬ ಸ್ಥಿತಿಯಲ್ಲಿರುವುದರಿಂದ ಇಲ್ಲಿನ ಸುಮಾರು 25 ಮಕ್ಕಳನ್ನು ಪಕ್ಕದ ಶಾಲೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿಯೇ ತಾತ್ಕಾಲಿಕವಾಗಿ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ವರದಿ ಪರಿಣಾಮ
ೆ.8 ರಂದು ‘ಹಾಸ್ಟೆಲ್ ಮಕ್ಕಳ ಶಾಲಾ ವಾಸ್ತವ್ಯ’ ಶೀರ್ಷಿಕೆಯಡಿ ವಿಜಯವಾಣಿ ತೂಬಗೆರೆಯಲ್ಲಿನ ದೇವರಾಜ ಅರಸು ಹಿಂದುಳಿದ ಕಲ್ಯಾಣ ಬಾಲಕರ ವಿದ್ಯಾರ್ಥಿನಿಲಯ ಶಿಥಿಲಗೊಂಡಿರುವ ಬಗ್ಗೆ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಾರ್ಡನ್ ಕರ್ತವ್ಯಕ್ಕೆ ಮೆಚ್ಚುಗೆ: ಇಲ್ಲಿ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವೆಂಕಟೇಶ್ ಮಕ್ಕಳ ಹಾಗೂ ಅವರ ಪಾಲಕರಿಗೆ ಅಚ್ಚುಮೆಚ್ಚು ಎನಿಸಿದ್ದಾರೆ, ಮಕ್ಕಳ ಊಟ, ಉಪಾಹಾರ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸುವುದಲ್ಲಿ ಇದುವರೆಗೆ ಯಾವೊಂದು ದೂರು ಇಲ್ಲದಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಪಾಲಕರೊಂದಿಗೆ ಉತ್ತಮ ಸಂವಹನ ಹೊಂದಿದ್ದು, ಮಕ್ಕಳ ಯೋಗಕ್ಷೇಮ ವಿಚಾರದಲ್ಲಿ ತಾಯಿ ಮಮತೆ ತೋರಿಸುತ್ತಾರೆ ಹಾಸ್ಟೆಲ್ನಿಂದ ಸ್ಥಳಾಂತರಗೊಂಡ ನಂತರ ಮತ್ತಷ್ಟು ಮಕ್ಕಳ ಬಗ್ಗೆ ನಿಗಾ ವಹಿಸಿದ್ದಾರೆ ಎಂದು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ವರದಿ ನೋಡಿ ಹಾಸ್ಟೆಲ್ನ ವಾಸ್ತವ್ಯ ಸ್ಥಿತಿ ಗಮನಕ್ಕೆ ಬಂತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ, ಇದರ ಸಂಬಂಧ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ, ಶೀಘ್ರ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಲಾಗುವುದು. ಅಲ್ಲಿಯವರೆಗೆ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.
ನಿಸರ್ಗ ನಾರಾಯಣಸ್ವಾಮಿ, ಶಾಸಕಹಾಸ್ಟೆಲ್ನ ಗೋಡೆಗಳು ಬಿರುಕುಬಿಟ್ಟಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಇಲ್ಲಿನ 25 ಮಕ್ಕಳನ್ನ ಸರ್ಕಾರಿ ಶಾಲೆಗೆ ಸ್ಥಳಾಂತರಗೊಳಿಸಲಾಗಿದೆ, ಅಲ್ಲಿಯೇ ಊಟ, ಉಪಾಹಾರ ಸೇರಿ ಮೂಲಸೌಕರ್ಯಗಳೊಂದಿಗೆ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಲಾಗಿದೆ, ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿದ್ದೇವೆ, ಶಾಸಕರು ಭರವಸೆ ನೀಡಿದ್ದಾರೆ.
ಅನಿತಾ, ತಾಲೂಕು ಕಲ್ಯಾಣಾಧಿಕಾರಿ ದೊಡ್ಡಬಳ್ಳಾಪುರ