ಅಂಕೋಲಾ: ಮತ್ಸ್ಯ ಕ್ಷಾಮದ ನಡುವೆಯೂ ಲೈಟ್ ಫಿಶಿಂಗ್ ನಡೆಯುತ್ತಿದ್ದು, ಇದು ನಾಡದೋಣಿ ಮೀನುಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಯಾವುದೇ ಕಾರಣಕ್ಕೂ ಲೈಟ್ ಫಿಶಿಂಗ್ಗೆ ಅವಕಾಶ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ ನಾಡದೋಣಿಯ ಮೀನುಗಾರರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಶುಕ್ರವಾರ ನಡೆದಿದೆ.
ಮೀನುಗಾರರ ಮುಖಂಡ ಅಪ್ಪಣ್ಣ ಕಾಂಬಳೆ ಮಾತನಾಡಿ, ನಾಡದೋಣಿ ಮೀನುಗಾರರು ಮತ್ಸ್ಯ ಕ್ಷಾಮದಿಂದಾಗಿ ಈಗಾಗಲೇ ಬಸವಳಿದಿದ್ದಾರೆ. ಇನ್ನು ಅಲ್ಪ, ಸ್ವಲ್ಪ ಸಿಗುವ ಮೀನುಗಳನ್ನು ಲೈಟ್ ಫಿಶಿಂಗ್ ಬಳಸಿ ಹಿಡಿಯಲಾಗುತ್ತಿದೆ. ಇದು ಹೀಗೆ ಮುಂದುವರಿದರೆ ಮೀನುಗಾರರ ನಡುವೆ ಸಮುದ್ರದಲ್ಲಿಯೇ ಸಮರ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಇಲಾಖೆಯವರು ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಸಿಪಿಐ ಕೃಷ್ಣಾನಂದ ನಾಯಕ ಮಾತನಾಡಿ, ಲೈಟ್ ಫಿಶಿಂಗ್ ವಿರುದ್ಧ ನಾವು ಕ್ರಮ ಕೈಗೊಳ್ಳಲು ಆಗುವುದಿಲ್ಲ. ಬದಲಿಗೆ ಮೀನುಗಾರಿಕೆ ಇಲಾಖೆಯ ಅಧಿಕಾರಿ, ಕರಾವಳಿ ಕಾವಲು ಪಡೆಯ ಅಧಿಕಾರಿ ಹಾಗೂ ನಮ್ಮ ಪೊಲೀಸ್ ಠಾಣೆಯ ಮೂಲಕ ಮೀನುಗಾರರ ಸಭೆಯನ್ನು ಶೀಘ್ರವೇ ಕರೆದು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದರು.
ಪಿಎಸ್ಐ ಎ.ವೈ. ಕಾಂಬಳೆ, ಎಎಸ್ಐ ಗಳಾದ ಲಲಿತಾ ರಜಪೂತ, ಶ್ರೀಕಾಂತ ನಾಯ್ಕ, ಸಿಬ್ಬಂದಿ ಮೋಹನದಾಸ ಶೇಣ್ವಿ, ಮಂಜುನಾಥ ಲಕ್ಮಾಪುರ, ಸತೀಶ ನಾಯ್ಕ, ಆಸಿಫ್ ಸೇರಿದಂತೆ ಇತರರಿದ್ದರು.