ಹುಬ್ಬಳ್ಳಿ: ಭಾನುವಾರ ಎಡಬಿಡದೆ ಸುರಿದ ಮಳೆಯಿಂದ ವಾಣಿಜ್ಯ ನಗರಿ ತೋಯ್ದು ತೊಪ್ಪೆಯಾಯಿತು. ಕೋವಿಡ್ ನಿಯಂತ್ರಣಕ್ಕೆ ಲಾಕ್ಡೌನ್ ಹೇರಿದ್ದರೂ ನಿರಂತರ ಮಳೆ ಸುರಿದಿದ್ದರಿಂದ ವಾಹನ ಹಾಗೂ ಜನ ಸಂಚಾರ ಅಷ್ಟೊಂದು ಕಂಡುಬರಲಿಲ್ಲ.
ಬೆಳಗ್ಗೆ 6 ಗಂಟೆಯಿಂದ ದಿನಸಿ, ತರಕಾರಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಭಾನುವಾರ ಹೆಚ್ಚು ಜನರು ಮನೆಯಿಂದ ಹೊರಬಂದಿರಲಿಲ್ಲ. ಹಾಗಾಗಿ ಖರೀದಿ ಭರಾಟೆ ಜೋರಾಗಿರಲಿಲ್ಲ. ನಗರದ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಜನತಾ ಬಜಾರ್, ದುರ್ಗದಬೈಲ್ ಇತರೆಡೆ ಅಂಗಡಿಗಳ ಬಾಗಿಲು ಹಾಕಲಾಗಿತ್ತು. ಅಲ್ಲಲ್ಲಿ ಬ್ಯಾರಿಕೇಡ್ ಹಾಕಿದ್ದ ಪೊಲೀಸರು, ತಾವು ಮಳೆಯಿಂದ ತೋಯಿಸಿಕೊಳ್ಳದಂತೆ ನೋಡಿಕೊಂಡರು. ಕೆಲವೆಡೆ ವಾಹನ ಓಡಾಡಿದರೂ ಅಷ್ಟೊಂದು ತಲೆಕೆಡಿಸಿಕೊಳ್ಳಲಿಲ್ಲ.
ಮಾಂಸ ಖರೀದಿ ಜೋರು: ಭಾನುವಾರ ಮಟನ್ ಹಾಗೂ ಚಿಕನ್ ಖರೀದಿ ಜೋರಿತ್ತು. ಮಿಷನ್ ಕಾಂಪೌಂಡ್, ಕಾಳಿದಾಸ ನಗರ ವೃತ್ತ ಇತರೆಡೆ ಮಾಂಸದ ಅಂಗಡಿಗಳ ಮುಂದೆ ನಿಂತಿದ್ದ ಜನರು ಮಾಂಸ ಖರೀದಿ ಮಾಡಿದರು. ಮಳೆ ಲೆಕ್ಕಿಸದೆ ಜನರು ಸರತಿ ಸಾಲಿನಲ್ಲಿ ನಿಂತಿದ್ದರು.