ಕಲಬುರಗಿ: ನಗರದ ವಿಮಾನ ನಿಲ್ದಾಣ ಹತ್ತಿರ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಸ್ಥಾನ ಮರು ನಿರ್ಮಾಣಕ್ಕೆ ಪರ್ಯಾಯ ಸ್ಥಳ ಮತ್ತು 50 ಲಕ್ಷ ರೂ. ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ನೇತೃತ್ವದಲ್ಲಿ ಬಂಜಾರ ಸಮುದಾಯದ ಮುಖಂಡರಿಂದ ಮನವಿಪತ್ರ ಸ್ವೀಕರಿಸಿ ಈ ಭರವಸೆ ನೀಡಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣ ಆವರಣದಲ್ಲಿದ್ದ ಸಂತ ಸೇವಾಲಾಲ್ ಮಹಾರಾಜ ಹಾಗೂ ಮರಿಯಮ್ಮ ದೇವಿ ದೇವಸ್ಥಾನಗಳನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮತ್ತು ಕಿರಿಯ ಅಭಿಯಂತರರನ್ನು ಅಮಾನತು ಮಾಡಬೇಕು. ದೇವಸ್ಥಾನವನ್ನು ಬೇರೆಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ವಿಮಾನ ನಿಲ್ದಾಣ ನಿರ್ಮಾಣ ವೇಳೆ ಈ ದೇಗುಲಗಳನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು ಎಂದು ಭೂದಾನಿಗಳು ಅಧಿಕಾರಿಗಳಿಗೆ ಹೇಳಿಯೇ ಭೂಮಿಯನ್ನು ಹಸ್ತಾಂತರಿಸಿದ್ದರು. ಭೂಮಿ ಕಳೆದುಕೊಂಡವರಲ್ಲಿ ಶೇ.90 ಬಂಜಾರಿಗರಿದ್ದಾರೆ. ಮದಿಯಾಳ ತಾಂಡಾ, ಮೋಕಿನ ತಾಂಡಾ, ಸಾಧುನಾಯಕ ತಾಂಡಾ ಮತ್ತು ಶ್ರೀನಿವಾಸ ಸರಡಗಿ ಗ್ರಾಮಸ್ಥರು ತಮ್ಮ ಭೂಮಿ ದಾನ ಮಾಡುವ ಸಂದರ್ಭದಲ್ಲಿ ದೇವಸ್ಥಾನಗಳನ್ನು ಉಳಿಸಿಕೊಳ್ಳುವ ಭರವಸೆಯನ್ನು ಜಿಲ್ಲಾಡಳಿತ ನೀಡಿತ್ತು ಎಂದು ಗಮನ ಸೆಳೆದರು.
ಇದಕ್ಕೆ ಸಕಾರಾತ್ಮಕ ಸ್ಪಂದಿಸಿದ ಸಿಎಂ ಬಿಎಸ್ ವೈ , ದೇಗುಲ ನಿರ್ಮಾಣಕ್ಕೆ ಪರ್ಯಾಯ ಸ್ಥಳ ಮತ್ತು ಅನುದಾನ ಹಾಗೂ ನಿಲ್ದಾಣಕ್ಕೆ ಹೊಂದಿಕೊಂಡಿರುವ ಹೊಲಗಳಿಗೆ ತೆರಳಲು ರಸ್ತೆಯನ್ನೂ ನಿರ್ಮಿಸಿ ಕೊಡುವುದಾಗಿ ಅಭಯ ನೀಡಿದರು.
ಸಂಸದ ಡಾ.ಉಮೇಶ್ ಜಾಧವ್, ಬಂಜಾರ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಶಂಕರ ಪವಾರ್, ಸಮುದಾಯದ ಗುರು ಶ್ರೀ ಪರ್ವತಲಿಂಗ ಪರಮೇಶ್ವರ ಮಹಾರಾಜ್, ಮುಖಂಡ ಸುಭಾಷ ರಾಠೋಡ್ ಇತರರಿದ್ದರು.