ಮೈಸೂರು : ರಾಜಸ್ಥಾನದಲ್ಲಿ ದಲಿತ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ ಕೊಲೆಗೈದಿರುವ ಘಟನೆ ಖಂಡಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಶುಕ್ರವಾರ ಹುಣಸರಿನಲ್ಲಿ ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಕಚೇರಿ ಆವರಣದ ಮುಂಭಾಗ ಜಮಾಯಿಸಿದ ಸದಸ್ಯರು, ರಾಜಸ್ಥಾನ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ದಲಿತ ಮುಖಂಡ ಹರಿಹರ ಆನಂದಸ್ವಾಮಿ ಮಾತನಾಡಿ, ಸ್ವಾತಂತ್ರೃ ದೊರಕಿ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲೂ ದೇಶದಲ್ಲಿ ಅಸ್ಪಶ್ಯತೆ ತಾಂಡವವಾಡುತ್ತಿರುವುದಕ್ಕೆ ರಾಜಸ್ಥಾನದಲ್ಲಿನ ಈ ಘಟನೆಯೇ ಸಾಕ್ಷಿ. ಮುಗ್ಧ ಬಾಲಕನನ್ನು ಬರ್ಬರವಾಗಿ ಕೊಲೆಗೈದ ಶಿಕ್ಷಕನ ಮನಸ್ಥಿತಿ ಖಂಡನೀಯ. ಘಟನೆಗೆ ಕಾರಣರಾದ ಶಿಕ್ಷಕ ಬೇಲ್ಸಿಂಗ್ಗೆ ಗಲ್ಲು ಶಿಕ್ಷೆಯಾಗಬೇಕು ಹಾಗೂ ವಿದ್ಯಾರ್ಥಿ ಇಂದ್ರಕುಮಾರ್ ಕುಟುಂಬಕ್ಕೆ ಸರ್ಕಾರ 1 ಕೋಟಿ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ತಹಸೀಲ್ದಾರ್ ಎಸ್.ಯು.ಅಶೋಕ್ ಅವರಿಗೆ ಮನವಿ ಸಲ್ಲಿಸಲಾಯಿತು. ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಮಾತನಾಡಿದರು. ದಲಿತ ಮುಖಂಡರಾದ ಬಸವಲಿಂಗಯ್ಯ, ದೇವೇಂದ್ರ ಕುಳುವಾಡಿ, ಕಿರಿಜಾಜಿ ಗಜೇಂದ್ರ, ಬಲ್ಲೇನಹಳ್ಳಿ ಕೆಂಪರಾಜು, ಪೌರಕಾರ್ಮಿಕ ಸಂಘದ ಮುರುಗೇಶ, ಮಾದ, ಅಲೆಮಾರಿ ಸಂಘದ ಶೇಖರ, ಹರೀಶ, ಶಿವಾಜಿ ಮಂಗಳೂರು ಮಾಳ, ಮಹಿಳಾ ಸಂಘದ ಸಾವಿತ್ರಿಬಾಯಿ, ಬಿವಿರಬಾಯಿ ಇತರರು ಇದ್ದರು.