ಬೆಳಗಾವಿ : ಹೊಸ ಪಿಂಚಣಿ ವ್ಯವಸ್ಥೆ ರದ್ದುಪಡಿಸುವುದು ಹಾಗೂ ಏಳನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಮಾ.1ರಂದು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಜಿಲ್ಲಾದ್ಯಂತ ಎಲ್ಲ ನೌಕರರು ಬೆಂಬಲ ವ್ಯಕ್ತಪಡಿಸಿ, ಕರ್ತವ್ಯಕ್ಕೆ ಗೈರಾಗಲು ನಿರ್ಧರಿಸಲಾಯಿತು. ಜಿಲ್ಲೆಯ ರಾಜ್ಯ ಸರ್ಕಾರಿ ನೌಕರ ಭವನದಲ್ಲಿ ಇತ್ತೀಚೆಗೆ ಕರೆಯಲಾಗಿದ್ದ ಬೆಳಗಾವಿ ಜಿಲ್ಲೆಯ ವಿವಿಧ ವೃಂದ ಸಂಘಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಸಂಘದ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಎಲ್ಲ ಸದಸ್ಯರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.
ಬೆಳಗಾವಿ ಜಿಲ್ಲಾ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಗೋಕಾವಿ ಮಾತನಾಡಿ, 7ನೇ ವೇತನ ಆಯೋಗ ಜಾರಿಗೊಳಿಸುವುದಾಗಿ ಘೊಷಿಸಿದ್ದ ಸರ್ಕಾರ ಪ್ರಸ್ತುತ ಬಜೆಟ್ನಲ್ಲಿ ಘೋಷಿಸದೆ ಬೇಸರ ತಂದಿದೆ. ಮುಷ್ಕರಕ್ಕೆ ಮುಂದಾದ ಬಳಿಕ ಇದೀಗ ಸಿಎಂ ಬೊಮ್ಮಾಯಿ ಅವರು, 7ನೇ ವೇತನ ಆಯೋಗವನ್ನು ಮಾರ್ಚ್ನಲ್ಲಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದರೂ, ಸರ್ಕಾರಿ ಆದೇಶ ಹೊರಡಿಸುವವರೆಗೂ ಮುಷ್ಕರದಿಂದ ಯಾರೊಬ್ಬರೂ ಹಿಂದೆ ಸರಿಯದೆ ಸರ್ಕಾರದ ಮೇಲೆ ಒತ್ತಡ ಹೇರೋಣ ಎಂದರು. ಅಧ್ಯಕ್ಷ ಬಸವರಾಜ ರಾಯವ್ವಗೋಳ, ಖಾನಾಪುರ ತಾಲೂಕು ಅಧ್ಯಕ್ಷ ಬಸವರಾಜ ಯಳ್ಳೂರ, ಆನಂದಗೌಡ ಕಾದ್ರೊಳ್ಳಿ. ಎಸ್.ಎಸ್.ಮಠದ. ಶೇಖರ ಕರಂಬಳಕರ, ಅನ್ವರ್ ಲಂಗೋಟಿ ಇತರರಿದ್ದರು.