ಯರಗಟ್ಟಿ: ಕೃಷಿ ಮತ್ತು ಕುಡಿಯುವ ನೀರಿಗಾಗಿ ಅತ್ಯವಶ್ಯವಾಗಿರುವ ಮಹದಾಯಿ ಮತ್ತು ಮೇಕೆದಾಟು ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ಮತ್ತೇ ರಾಜ್ಯಾದ್ಯಂತ ಹೋರಾಟಕ್ಕೆ ಇಳಿಯಲಾಗುವುದು ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ವಿವಿಧ ಸಂಘಟನೆಗಳು ಶುಕ್ರವಾರ ಹಮ್ಮಿಕೊಂಡಿದ್ದ 43ನೇ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನರಗುಂದ, ನವಲಗುಂದ ಪ್ರದೇಶದಲ್ಲಿ ರೈತರಿಗೆ ಒತ್ತಾಯದ ನೀರಾವರಿ ತೆರಿಗೆ ವಿಧಿಸಿದ್ದನ್ನು ಪ್ರತಿಭಟಿಸಿ ಬಂಡಾಯವೆದ್ದ ರೈತರ ಮೇಲೆ ಪೊಲೀಸರು ಹಾರಿಸಿದ ಗುಂಡಿಗೆ ಎದೆಯೊಡ್ಡಿದ ವೀರ ರೈತರ ಸ್ಮರಣೆ ಇದು. ರೈತ ಬೆಳೆದ ಕಬ್ಬಿಗೆ ಸರಿಯಾದ ಬೆಲೆಯೂ ಇಲ್ಲ, ಕಾರ್ಖಾನೆಗಳಿಂದ ಬಿಲ್ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಇದರ ಕುರಿತು ಮುತುವರ್ಜಿ ವಹಿಸಿ ರೈತರ ಕಬ್ಬಿನ ಬಾಕಿ ಹಣವನ್ನು ಕೊಡಿಸಬೇಕು ಎಂದರು.
ಹೋಟೆಲ್ ಉದ್ಯಮಿ ಜೆ. ರತ್ನಾಕರ ಶೆಟ್ಟಿ ಮಾತನಾಡಿ, ನೂತನವಾಗಿ ತಾಲೂಕಾಗಿ ರಚನೆಯಾಗಿರುವ ಯರಗಟ್ಟಿಯಲ್ಲಿ ಸರ್ಕಾರಿ ಕಚೇರಿಗಳು ಪ್ರಾರಂಭವಾಗಬೇಕು. ಈ ಭಾಗದ ರೈತರಿಗೆ ಸಾಕಷ್ಟು ನೀರಾವರಿ ಸೌಲಭ್ಯ ದೊರೆಯಬೇಕಿದೆ. ಅಲ್ಲದೇ ಯರಗಟ್ಟಿಯಲ್ಲಿ ಶಿಕ್ಷಣಕ್ಕೆ ಇನ್ನಷ್ಟು ಒತ್ತು ನೀಡಬೇಕಿದ್ದು, ಈ ಕುರಿತು ಸರ್ಕಾರದ ಗಮನ ಸೆಳೆಯುವುದು ಅತ್ಯವಶ್ಯವಾಗಿದೆ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಸೋಮು ರೈನಾಪೂರ, ರಂಗಪ್ಪ ಗಂಗರಡ್ಡಿ, ವೆಂಕಪ್ಪ ಹುರುಕನವರ, ಯಕ್ಕೇರೆಪ್ಪ ತಳವಾರ, ಶೇಖರ ಖಿಲಾರಿ, ಸತ್ತೆಪ್ಪ ಏಳ್ಳೆಮ್ಮಿ, ಗಿರೆಪ್ಪ ಗಂಗರಡ್ಡಿ, ಮಾರುತಿ ಕುರಿ, ಭೀಮಶಿ ಗದಾಡಿ, ಬೋರಗೌಡ ದೊಡ್ಡಬಳ್ಳಾಪುರ ಇತರರು ಇದ್ದರು.