ಚಿತ್ರದುರ್ಗ: ಜಿಲ್ಲೆಯ ಅರ್ಹ ಮತದಾರರೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಅರಿವು ಮೂಡಿಸಲು ಮ್ಯಾರಥಾನ್, ವಾಕಥಾನ್ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಎಸ್.ಜೆ.ಸೋಮಶೇಖರ್ ತಿಳಿಸಿದರು.
ವೀರವನಿತೆ ಒನಕೆ ಓಬವ್ವ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಯಿಂದ ಗುರುವಾರ ನಡೆದ ಮ್ಯಾರಥಾನ್ಗೆ ಚಾಲನೆ ನೀಡಿ ಮಾತನಾಡಿದರು.
ಏ. 26ರಂದು ಮತಗಟ್ಟೆ ಕೇಂದ್ರಕ್ಕೆ ತೆರಳಿ ತಮ್ಮ ಹಕ್ಕನ್ನು ಅರ್ಹರು ಚಲಾಯಿಸಬೇಕು. ಕಳೆದ ಲೋಕಸಭಾ ಚುನಾವಣೆಗಿಂತ ಈ ಬಾರಿ ಹೆಚ್ಚು ಮತ ಚಲಾಯಿಸಿ ಪ್ರಜಾಪ್ರಭುತ್ವ ಸದೃಢಗೊಳಿಸಬೇಕು ಎಂದು ಮನವಿ ಮಾಡಿದರು.
ಓಬವ್ವ ವೃತ್ತದಿಂದ ಆರಂಭವಾಗಿ, ಸರಸ್ವತಿ ಕಾನೂನು ಕಾಲೇಜಿನ ರಸ್ತೆ, ಸಿ.ಕೆ.ಪುರ, ಕೆಳಗೋಟೆ, ಮುನ್ಸಿಪಾಲ್ ಕಾಲನಿ, ಎಸ್ಪಿ ಕಚೇರಿ ಮುಂಭಾಗ, ತಿಪ್ಪಜ್ಜಿ ವೃತ್ತ ಮಾರ್ಗವಾಗಿ ಸಂಚರಿಸಿ ಓಬವ್ವ ವೃತ್ತದ ಬಳಿ ಮುಕ್ತಾಯವಾಯಿತು. ದಾರಿಯುದ್ದಕ್ಕೂ ಮತದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಘೋಷಣೆ ಕೂಗಿ, ಬಿತ್ತಿ ಫಲಕ ಪ್ರದರ್ಶಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಕಂದಾಯಾಧಿಕಾರಿ ಜಯಣ್ಣ ಇತರರಿದ್ದರು.