ಹೊಳೆಹೊನ್ನೂರು: ಮಕ್ಕಳಿಗೆ ಮೌಲ್ಯಗಳನ್ನು ಕಲಿಸುವ ನಿಟ್ಟಿನಲ್ಲಿ ಪಾಲಕರು ಮುತುವರ್ಜಿ ವಹಿಸಬೇಕು ಎಂದು ಶಿವಮೊಗ್ಗ ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಶನಿವಾರ ಯಡೇಹಳ್ಳಿಯ ಜ್ಞಾನಶ್ರೀ ಪಬ್ಲಿಕ್ ಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ಚವನ ನೀಡಿ, ಪಾಲಕರು ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕಿ ರ್ಯಾಂಕ್ಗಳನ್ನು ಬೆನ್ನಟ್ಟಿ ಹೋಗುವುದನ್ನು ಕೈ ಬಿಡಬೇಕು. ಮಕ್ಕಳಲ್ಲಿ ಸಂಸ್ಕಾರ ಬೆಳೆಸಿ ಸಮಾಜಕ್ಕೆ ಸದೃಢ ವ್ಯಕ್ತಿಯನ್ನು ಕೊಡುಗೆ ನೀಡುವ ಕಡೆ ಗಮನವಹಿಸಬೇಕು. ಚಿಕ್ಕಂದಿನಿಂದಲೇ ಮಕ್ಕಳಿಗೆ ಗುರು ಹಿರಿಯರಿಗೆ ಗೌರವ ನೀಡುವುದನ್ನು ರೂಢಿಮಾಡಬೇಕು. ದೈನಂದಿನ ಕಲಿಕೆಯಲ್ಲಿ ಮೌಲ್ಯ ಶಿಕ್ಷಣದ ಮಹತ್ವದ ತಿಳಿಸಬೇಕು. ಮೌಲ್ಯಯುತವಾದ ನೀತಿ ಶಿಕ್ಷಣ ಪಠ್ಯದೊಂದಿಗೆ ಮಕ್ಕಳ ಮನ ಸೇರಬೇಕು. ಮಕ್ಕಳಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಪರಿಣತಿ ಪಡೆದು ಜೀವನ ರೂಪಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದರು .
ಶಾಲೆಯ ಮುಖ್ಯಸ್ಥ ದೇವರಾಜ್ ಮಾತನಾಡಿ, ಗ್ರಾಮೀಣ ಭಾಗದ ಶಾಲೆಯೊಂದು ನಗರದ ಸುಸಜ್ಜಿತ ಕಲಾ ಮಂದಿರದಲ್ಲಿ ಶಾಲಾ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ. ನಗರಗಳ ಶಾಲಾ ವಾರ್ಷಿಕೋತ್ಸವದಂತೆ ಹಳ್ಳಿ ಭಾಗದ ಶಾಲಾ ಹಬ್ಬಗಳು ಮೆರುಗಿನಿಂದ ಕೂಡಿರಬೇಕು ಎನ್ನುವುದು ನಮ್ಮ ಸಂಸ್ಥೆಯ ಆಶಯ ಎಂದರು.