ಜೆ.ಜಿ.ಶ್ರೀನಿವಾಸಮೂರ್ತಿ, ಬೇತಮಂಗಲ
ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ಹೈವೇ ಯೋಜನೆ 2011ರಲ್ಲಿ ಘೋಷಣೆಯಾಗಿತ್ತಾದರೂ, 10 ವರ್ಷಗಳ ನಂತರ ಚಾಲನೆ ಸಿಕ್ಕಿದ್ದು, ಕಾಮಗಾರಿ ಭರದಿಂದ ನಡೆಯುತ್ತಿದೆ. ಕೆಜಿಎಫ್ ತಾಲೂಕಿನ ಹಲವೆಡೆ ಯುದ್ಧಭೂಮಿಯ ವಾತಾವರಣ ಕಂಡು ಬರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಷ್ಠಾನಗೊಳಿಸುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಈ ರಸ್ತೆಯು ಒಟ್ಟು 18 ಸಾವಿರ ಕೊಟಿ ರೂ.ವೆಚ್ಚದಲ್ಲಿ ನಿಮಾರ್ಣವಾಗುತ್ತಿದೆ.
ಹೊಸಕೋಟೆಯಿಂದ ಚೆನ್ನೈನ ಶ್ರೀ ಪೆರಂಬದೂರುವರೆಗೆ 262 ಕಿ.ಮೀ ಉದ್ದ, 90 ಮೀ (300ಅಡಿ) ಅಗಲದ ರಸ್ತೆಯು ಜಿಲ್ಲೆಯಲ್ಲಿ 77 ಕಿ.ಮೀ ಹಾದುಹೋಗಲಿದೆ. ಕೆಜಿಎಫ್ ತಾಲೂಕಿನಲ್ಲಿ ಸಾಗುವ 23 ಕಿ.ಮೀ ಉದ್ದದ ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ.
7 ವರ್ಷಗಳಿಂದ ಪ್ರಕ್ರಿಯೆ: 2011ರಲ್ಲಿ ಯೋಜನೆ ಘೋಷಣೆಯಾಗಿತ್ತು. 2015 ಮೇನಲ್ಲಿ ಭೂಸ್ವಾಧಿನ ಪಡೆಯುವ ಬಗ್ಗೆ ವಿಶೇಷ ಭೂ ಸ್ವಾಧಿನಾಧಿಕಾರಿ ಅಧಿಸೂಚನೆ ಹೊಡಿಸುವ ಮೂಲಕ ಬೃಹತ್ ಯೋಜನೆಯ ಪ್ರಾಥಮಿಕ ಹಂತದ ಕಾರ್ಯಕ್ಕೆ ಚಾಲನೆ ನೀಡಲಾಯಿತು. ನಂತರ ರೈತರು ಹಾಗೂ ರೈತಪರ ಸಂಘಟನೆಗಳ ಸಾಕಷ್ಟು ವಿರೋಧಗಳ ಮಧ್ಯೆಯೂ ಜಿಲ್ಲೆಯಲ್ಲಿ ರೈತರ 1646.36 ಎಕರೆ, 2100 ಎಕರೆ ಸರ್ಕಾರಿ ಭೂಮಿ ಸೇರಿ ಒಟ್ಟು 3700 ಎಕರೆ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಇದಕ್ಕೆ 5 ವರ್ಷ ಹಿಡಿಯಿತಾದರೂ, ರೈತರು ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಡುವೆ ಹಗ್ಗಜಗ್ಗಾಟ ಈಗಲೂ ಮುಂದುವರಿದಿದೆ.ಮೂರು ಹಂತದ ಕಾಮಗಾರಿ: 262 ಕಿ.ಮೀ ರಸ್ತೆಯನ್ನು 3 ಹಂತಗಳನ್ನಾಗಿ ವಿಂಗಡಿಸಿದ್ದು 10 ಪ್ಯಾಕೇಜ್ ಮಾಡಲಾಗಿದೆ.
ಹೊಸಕೋಟೆಯಿಂದ ರಾಜ್ಯದ ಗಡಿ ಗ್ರಾಮ ಕೆಜಿಎಫ್ ತಾಲೂಕು ಪೂಗಾನಹಳ್ಳಿವರೆಗೆ ಒಟ್ಟು 77 ಕಿ.ಮೀ.(3 ಪ್ಯಾಕೇಜ್), ಇದರಲ್ಲಿ ಮಾಲೂರು ತಾಲೂಕುವರೆಗೆ 22 ಗ್ರಾಮಗಳ ಮಾರ್ಗದಲ್ಲಿ 26 ಕಿ.ಮೀ, ಕೋಲಾರ ತಾಲೂಕಿನಲ್ಲಿ 2 ಗ್ರಾಮಗಳು ಅರ್ಧ ಕಿ.ಮೀ., ಮಾಲೂರಿನಿಂದ ಬಂಗಾರಪೇಟೆ ತಾಲೂಕುವರೆಗೂ 14 ಗ್ರಾಮಗಳು 27 ಕಿ.ಮೀ. ಮತ್ತು ಬಂಗಾರಪೇಟೆಯಿಂದ ಕೆಜಿಎಫ್ನ ಎನ್ಜಿ ಹುಲ್ಕೂರುವರೆಗೆ 22 ಗ್ರಾಮಗಳು 23 ಕಿ.ಮೀ.ರಸ್ತೆ ಒಳಗೊಂಡಿದೆ. 2ನೇ ಹಂತದ ಯೋಜನೆಯಲ್ಲಿ ಆಂಧ್ರದ ಬೈರೆಡ್ಡಿಪಲ್ಲಿ, ಪಲಮನೇರು, ಚಿತ್ತೂರು ಮಾರ್ಗದಲ್ಲಿ ಆಂಧ್ರ ಗಡಿ ಗುಡಿಪಾಲವರೆಗೆ 95 ಕಿಮೀ (4 ಪ್ಯಾಕೇಜ್), 3ನೇ ಹಂತದಲ್ಲಿ ಗುಡಿಪಾಲದಿಂದ ತಮಿಳುನಾಡಿನ ವಾಲಜಪೇಟೆ, ಅರುಕೋಣಂ ನಂತರ ಕಾಂಚೀಪುರಂ ಮಾರ್ಗವಾಗಿ ಶ್ರೀ ಪೆರಂಬದೂರುವರೆಗೆ 90 ಕಿ.ಮೀ ಸೇರಿ ಒಟ್ಟು 262 ಕಿ.ಮೀ ರಸ್ತೆ ನಿಮಾರ್ಣವಾಗುತ್ತಿದೆ.
ನೂರಾರು ವಾಹನ-, ಸಾವಿರಾರು ಕಾರ್ಮಿಕರು:
ರಾಜ್ಯದಲ್ಲಿ ಕಾಮಗಾರಿಯನ್ನು ಕೇಂದ್ರ ಸಚಿವ ನಿತಿನ್ಗಡ್ಕರಿ ಅಳಿಯ ಮಾಲೀಕತ್ವದ ದಿಲೀಪ್ ಬಿಲ್ಡ್ಕಾನ್ ಕಂಪನಿ ಗುತ್ತಿಗೆ ಪಡೆದಿದ್ದು, ಅಧಿಕಾರಿಗಳು, ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಗುಜರಾತ್ ಮತ್ತಿತರ ಉತ್ತರದ ರಾಜ್ಯಗಳಿಂದ ಕರೆಸಿಕೊಳ್ಳಲಾಗಿದೆ. ಕೆಜಿಎಫ್ ತಾಲೂಕಿನ ವೆಂಕಟಾಪುರ, ಬಂಗಾರಪೇಟೆಯ ಡಿ.ಕೆ. ಹಳ್ಳಿ ಬಳಿ ನೂರಾರು ಎಕರೆ ಪ್ರದೇಶದಲ್ಲಿ ಸೈನಿಕರ ಬಿಡಾರಗಳಂತೆ ಶೆಡ್ಗಳನ್ನು ನಿರ್ಮಿಸಲಾಗಿದೆ. ವಿವಿಧ ರೀತಿಯ ವಾಹನಗಳು ಮತ್ತು ಕಾರ್ಮಿಕರೊಂದಿಗೆ ಹಗಲು ರಾತ್ರಿ ಎನ್ನದೆ ಕಾಮಗಾರಿ ನಡೆಯುತ್ತಿದೆ.
ಎಕ್ಸ್ಪ್ರೆಸ್ ವೇ ವಿಶೇಷ:
8 ಪಥ ರಸ್ತೆ ನಿಮಾರ್ಣ ಉದ್ದೇಶವಾಗಿದ್ದರೂ, ಪ್ರಸ್ತುತ 4 ಪಥ ನಿಮಾರ್ಣವಾಗುತ್ತಿದೆ. ಗಂಟೆಗೆ 120 ಕಿ.ಮೀ ವೇಗದಲ್ಲಿ ಸಂಚರಿಸಬಹುದಾಗಿದ್ದು, ಈಗಿರುವ ರಾ. ಹೆದ್ದಾರಿಯಲ್ಲಿ ಸಂಚರಿಸುವುದಕ್ಕಿಂತ ಸುಮಾರು 80 ಕಿ.ಮೀ ರಸ್ತೆ ಕಡಿಮೆಯಾಗಲಿದೆ. ಪ್ರಯಾಣದ ಸಮಯ ಮೂರು ಗಂಟೆ ಕಡಿಮೆಯಾಗಲಿದೆ. ಮಾರ್ಗದಲ್ಲಿ 162 ಸೇತುವೆ, 144 ಸಣ್ಣ ಸೇತುವೆ, 9 ಮಧ್ಯಮ ಸೇತುವೆ, 9 ಅತಿ ದೊಡ್ಡ ಸೇತುವೆಗಳು, 52 ಅಂಡರ್ಪಾಸ್ಗಳು, 41 ಸಣ್ಣ ಅಂಡರ್ಪಾಸ್ ಮತ್ತು 17 ಫ್ಲೈ ಓವರ್ಗಳು ನಿಮಾರ್ಣವಾಗುತ್ತಿವೆ. ಕೆಜಿಎಫ್ ತಾಲೂಕಿನಲ್ಲಿ 14 ಸೇತುವೆ, 6 ಮೇಲ್ಸೇತುವೆ, 40 ಮೀನ 6 ಸೇತುವೆ, 40 ಅಂಡರ್ ಪಾಸ್, 40 ಸಣ್ಣ ಅಂಡರ್ಪಾಸ್ಗಳು ಹಾಗೂ ಬೇತಮಂಗಲ, ಕೂಳೂರು ಹಾಗೂ ರಾಯಸಂದ್ರ ಬಳಿ ಪಾಲಾರ್ ನದಿಗೆ ಅಡ್ಡಲಾಗಿ 480 ಅಡಿ ಉದ್ದದ ಬೃಹತ್ 3 ಸೇತುವೆಗಳು ನಿಮಾರ್ಣವಾಗಲಿವೆ.
2 ಕಡೆ ಮಾತ್ರ ಜಂಕ್ಷನ್:
ಹೊಸಕೋಟೆಯಿಂದ ರಾಜ್ಯದ ಗಡಿತನಕ 6 ಕಡೆ ಇಂಟರ್ ಸಿಟ್ ತಿರುವುಗಳನ್ನು ನಿರ್ಮಿಸಲಿದ್ದು, ಕೆಜಿಎಫ್ ತಾಲೂಕಿನ ಕೃಷ್ಣಾವರಂ, ವೆಂಗಸಂದ್ರ ಬಳಿ ಇಳಿಜಾರು ರಸ್ತೆ ನಿಮಾರ್ಣವಾಗಲಿದೆ. ಇದರಿಂದಾಗಿ ಬೇತಮಂಗಲದಿಂದ ಆಂಧ್ರ ಗಡಿವರೆಗೆ ಭೂಮಿ ಬೆಲೆ ಗಗನಕ್ಕೇರಿದೆ. 2025ರ ಮಾರ್ಚ್ ಒಳಗೆ ಸಂಚಾರಕ್ಕೆ ಮುಕ್ತವಾಗಲಿದ್ದು, ಪ್ರಧಾನಮಂತ್ರಿಯವರೇ ಉದ್ಘಾಟನೆ ಮಾಡಲಿದ್ದಾರೆ.
ಕಾರಿಡಾರ್ ರಸ್ತೆ ನಮ್ಮ ತಾಲೂಕಿನಲ್ಲಿ ಹಾದು ಹೋಗುತ್ತಿರುವುದು ಸಂತೋಷದ ವಿಷಯ. ಮನಮೋಹನ್ಸಿಂಗ್ ಪ್ರಧಾನಿಗಳಾಗಿದ್ದಾಗ ಯೋಜನೆ ಘೋಷಿಸಲಾಗಿತ್ತು. ಇದೀಗ ಚಾಲನೆ ಸಿಕ್ಕಿದೆ. ಇದರಿಂದಾಗಿ ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಯಾಗಲಿದ್ದು, ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆ. ಜತೆಗೆ ಈ ರಸ್ತೆಯಲ್ಲಿ ಸಂಚರಿಸುವವರಿಗೆ ಸಾಕಷ್ಟು ಸಮಯ ಉಳಿತಾಯವಾಗಲಿದೆ.
ಎಂ.ರೂಪಕಲಾ, ಶಾಸಕಿ,