ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಕಟನೂರಿನಲ್ಲಿ ಡಿ. 18 ರಿಂದ ಹಮ್ಮಿಕೊಂಡಿರುವ ಯಲ್ಲಮ್ಮದೇವಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೆ ತೊಂದರೆಯಾಗದಂತೆ ನಿಗಾವಹಿಸಬೇಕು ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಮಾಧವರಾವ ಗಿಟ್ಟೆ ಸೂಚಿಸಿದರು.
ಗ್ರಾಮದಲ್ಲಿ ಯಲ್ಲಮ್ಮದೇವಿ ಜಾತ್ರೆ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ಪೂರ್ವಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸೇರಿ ವಿವಿಧ ರಾಜ್ಯಗಳ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ಜಾತ್ರೆಯಲ್ಲಿ ವಾಹನ ಸಂಚಾರ, ಶೌಚಗೃಹ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮುತ್ತು ಕಟ್ಟುವುದು, ಪ್ರಾಣಿ ಬಲಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಭಾರಿ ವಾಹನ ಹಾಗೂ ಕಬ್ಬು ತುಂಬಿದ ವಾಹನ ತೆರಳಲು ತಾತ್ಕಾಲಿಕ ಬೈಪಾಸ್ ನಿರ್ಮಿಸಬೇಕು. ದೇವಸ್ಥಾನ ಮತ್ತು ಜಾತ್ರೆ ಜರುಗುವ ರಸ್ತೆಯಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಬೇಕು. ಎಲ್ಲ ವ್ಯವಸ್ಥೆಯನ್ನು ವಾರದೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಮಾತನಾಡಿದರು. ತಾಪಂ ಪ್ರಭಾರಿ ಇಒ ಈರಣ್ಣ ವಾಲಿ, ಪಿಡಬ್ಲ್ಯುಡಿ ಅಭಿಯಂತ ಆರ್.ಪಿ.ಅವತಾಡೆ, ಸಣ್ಣ ನೀರಾವರಿ ಇಲಾಖೆಯ ಎಸ್.ಎಸ್.ಮಾಕಾಣಿ, ಶಿರಸ್ತೆದಾರ ಎಂ.ವಿ.ಬಿರಾದಾರಪಾಟೀಲ, ಅರ್ಚಕ ಶಾಮರಾವ ಪೂಜಾರಿ, ಗ್ರಾಪಂ ಅಧ್ಯಕ್ಷ ಬಾಳಾಸಾಹೇಬ ಪೂಜಾರಿ, ಕಲ್ಮೇಶ ಕಲಮಡಿ, ಪ್ರಲ್ಲಾದ ಪೂಜಾರಿ, ಪ್ರಭಾಕರ ಚವ್ಹಾಣ, ಅನಿಲ ಮುಳಿಕ, ಸಿದ್ದಪ್ಪ ತುಂಗಳ ಇತರರಿದ್ದರು.