ಕೋಲಾರ: ಸಂಚಾರಿ ನಿಯಮ ಪಾಲನೆಗೆ ಇನ್ನಿಲ್ಲದ ಶ್ರಮ ಪಡುತ್ತಿರುವ ಪೊಲೀಸರು ಬೈಕ್ಗಳಲ್ಲಿ ಶೋಕಿ ಮಾಡುವ ಪುಂಡರಿಗೆ ಚುರುಕು ಮುಟ್ಟಿಸಲು ಮುಂದಾಗಿದ್ದಾರೆ. ಕರ್ಕಶ ಶಬ್ಧ ಹೊರಸೂಸುವ ಸೈಲೆನ್ಸರ್ ಅಳವಡಿಸಿಕೊಂಡಿದ್ದವರು, ವೀಲಿಂಗ್ ಮಾಡುತ್ತಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಿ, ವಶಪಡಿಸಿಕೊಂಡಿದ್ದ 85ಕ್ಕೂ ಹೆಚ್ಚು ಬೈಕ್ಗಳ ಸೈಲೆನ್ಸರ್ಗಳನ್ನು ಬುಧವಾರ ನಗರದ ಕಾಲೇಜು ವೃತ್ತದಲ್ಲಿ ಎಸ್ಪಿ ಡಿ.ದೇವರಾಜ್ ನೇತೃತ್ವದಲ್ಲಿ ರೋಡ್ ರೋಲರ್ನಿಂದ ನಾಶಪಡಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಇದು ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಯಿತು.
ನಂತರ ಮಾತನಾಡಿದ ಎಸ್ಪಿ ಡಿ.ದೇವರಾಜ್, ಬೈಕ್ಗಳಿಗೆ ದುಬಾರಿ ಬೆಲೆಯ ಸೈಲೆನ್ಸರ್ ಅಳವಡಿಸಿಕೊಂಡು ವೇಗವಾಗಿ ಸಂಚರಿಸುವುದು, ವಾರಾಂತ್ಯದ ದಿನಗಳಲ್ಲಿ ಬೆಂಗಳೂರು ಕಡೆಯವರು ಮತ್ತು ಜಿಲ್ಲೆಯ ಕೆಲವು ಯುವಕರು ವೀಲಿಂಗ್ ಮಾಡುತ್ತಿದ್ದ ಬಗ್ಗೆ ದೂರು ಕೇಳಿಬಂದಿತ್ತು. ಇತ್ತೀಚೆಗೆ ಪಾದಚಾರಿಗಳು, ದಂಪತಿಗೆ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದು ಗಾಯಗಳಾಗಿ ಆಸ್ಪತ್ರೆಗೂ ದಾಖಲಾಗಿದ್ದರು. ಈ ಬಗ್ಗೆ ದೂರು ದಾಖಲಾಗಿತ್ತು. ಇದರಿಂದಾಗಿ ಕ್ರಮ ಕೈಗೊಳ್ಳಲು ಮುಂದಾಗಿದ್ದು, ನಗರ ಸಂಚಾರಿ ಠಾಣೆ, ಗ್ರಾಮಾಂತರ ಠಾಣೆ ಪೊಲೀಸರು ನರಸಾಪುರ ಬಳಿಯ ನಾಗಲಾಪುರ ಗೇಟ್ ಮತ್ತಿತರ ಕಡೆ ಕಾರ್ಯಾಚರಣೆ ನಡೆಸಿ 85ಕ್ಕೂ ಹೆಚ್ಚು ಬೈಕ್ಗಳನ್ನು ಜಪ್ತಿ ಮಾಡಲಾಗಿತ್ತು. ನಿಯಮ ಪಾಲಿಸದವರಿಗೆ 1.85 ಲಕ್ಷ ರೂ. ದಂಡ ಸಹ ಹಾಕಲಾಗಿತ್ತು ಎಂದರು.
ದಂಡ ಕಟ್ಟಿ ಬೈಕ್ ಬಿಡಿಸಿಕೊಂಡು ಹೋಗುವ ಯುವಕರು ಮತ್ತೆ ಚಾಳಿ ಮುಂದುವರಿಸುತ್ತಾರೆ. ಇದಕ್ಕೆ ತಡೆ ಹಾಕಬೇಕೆಂದು ನಿರ್ಧರಿಸಿ ಜಾಗೃತಿ ಜತೆಗೆ ಎಚ್ಚರಿಕೆ ನೀಡಲು ಸೈಲೆನ್ಸರ್ಗಳ ಮೇಲೆ ರೋಡ್ ರೋಲರ್ ಹರಿಸುವ ಮೂಲಕ ನಾಶಪಡಿಸಲಾಗಿದೆ. ಬೈಕ್ಗಳಿಗೆ ಕಂಪನಿಗಳ ಕಡಿಮೆ ಶಬ್ದದ ಸೈಲೆನ್ಸರ್ಗಳಿದ್ದರೆ ಮಾತ್ರವೇ ಓಡಾಡಬೇಕಿದ್ದು, ಅದು ಬಿಟ್ಟು ಗ್ಯಾರೇಜ್ಗಳಲ್ಲಿ ಸೈಲೆನ್ಸರ್ ಮಾರ್ಪಡಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಬೈಕ್ ಓಡಿಸುವ ಯುವಕರು, ಕೊಡಿಸುವ ಪಾಲಕರು, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ರೀತಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮುಂದುವರಿದರೆ ಐಪಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಬೈಕ್ ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಹಾನಗರಗಳು ಸೇರಿ ಇನ್ನಿತರ ಕಡೆಗಳಲ್ಲಿ ಆಟೋಗಳಿಗೆ ಕೆಟಿಪಿ ನಂಬರ್ ಸ್ಟಿಕ್ಕರಿಂಗ್ ನೀಡಲಾಗಿದ್ದು, ಅಂತೆಯೇ ನಗರದಲ್ಲೂ ಆಟೋಗಳಿಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಾಚರಣೆಯನ್ನು ಸಂಚಾರಿ ಪೊಲೀಸರು ಆರಂಭಿಸಿದ್ದಾರೆ. ಆಟೋಗಳು ಎಲ್ಲ ದಾಖಲೆ, ಆರ್ಟಿಒ ಅನುಮತಿ ಹೊಂದಿದ್ದರೆ ಮಾತ್ರವೇ ಕೆಟಿಪಿ ನಂಬರ್ ಸ್ಟಿಕ್ಕರಿಂಗ್ ಮಾಡಲಾಗುವುದು. ಸ್ಟಿಕ್ಕರ್ ಇಲ್ಲದೆ ಯಾವುದೇ ಕಾರಣಕ್ಕೂ ರಸ್ತೆಗೆ ಇಳಿಯುವಂತಿಲ್ಲ. ಈ ಬಗ್ಗೆ ಆಟೋ ಯೂನಿಯನ್ ಪದಾಧಿಕಾರಿಗಳಿಗೂ ಮಹಿತಿ ನೀಡಲಾಗಿದೆ ಎಂದರು.
ನಗರದಲ್ಲಿ ನಡೆಯುತ್ತಿರುವ ಈ ಎಲ್ಲ ಕಾರ್ಯಾಚರಣೆಗೆ ಸಂಚಾರಿ ಪೊಲೀಸರ ಶ್ರಮ ಸಾಕಷ್ಟಿದ್ದು, ಸಾರ್ವಜನಿಕರು ಸಹಕರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವಾರ್ಡ್ ನೀಡಲಾಗುವುದು ಎಂದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಘೋರ್ಪಡೆ, ಡಿವೈಎಸ್ಪಿ ರಮೇಶ್, ವೃತ್ತ ನಿರೀಕ್ಷಕ ರಾಘವೇಂದ್ರ ಪ್ರಕಾಶ್, ಸಂಚಾರಿ ಠಾಣೆಪಿಎಸ್ಐ ಅಣ್ಣಯ್ಯ ಇತರರು ಇದ್ದರು.
ಇಡೀ ನಗರವನ್ನು ಸಿಸಿಟಿವಿ ಕವರೇಜ್ ಮಾಡಲು ಮಾಸ್ಟರ್ ಪ್ಲಾನ್ ಸಿದ್ಧವಾಗುತ್ತಿದೆ. ಯೋಜನೆ ಜಾರಿಯಾದ ಬಳಿಕ, ವಾಹನಗಳು ಯಾವ ಕಡೆ ಹೋಗುತ್ತಿವೆ ಎನ್ನುವುದು ಸ್ಪಷ್ಟ ಚಿತ್ರಣ ನಮಗೆ ಸಿಗುತ್ತದೆ. ಟ್ರಾಫಿಕ್ ಮಾನಿಟರಿಂಗ್ ಸೆಂಟರ್ನಲ್ಲಿ ಅದನ್ನು ಪೊಲೀಸ್ ಸಿಬ್ಬಂದಿ ವೀಕ್ಷಿಸುತ್ತಿರುತ್ತಾರೆ. ಹಂತ&ಹಂತವಾಗಿ ಎಲ್ಲ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು.
ಡಿ.ದೇವರಾಜ್, ಎಸ್ಪಿ