ಕೊಡೇಕಲ್: ಈ ವರ್ಷ ಮುಂಗಾರು ಆರಂಭದಲ್ಲಿ ರೈತರು ತೊಗರಿ, ಹತ್ತಿ, ಸೂರ್ಯಕಾಂತಿ ಮತ್ತು ಮೆಕ್ಕೆಜೋಳ ಸೇರಿ ಇನ್ನಿತರ ಬೆಳೆಯನ್ನು ಬಿತ್ತನೆ ಮಾಡಿ ನಿಟ್ಟುಸಿರು ಬಿಡುವಾಗಲೆ ರೈತರಿಗೆ ಅತಿವೃಷ್ಠಿಯ ದರ್ಶನವಾಗಿದೆ.
ಮುಂಗಾರು ಮಳೆ ನೆರವಿನಿಂದ ಬೆಳೆಯುವ ಬೆಳೆಗಳು ಸಮೃದ್ಧವಾಗಿ ಬರುವ ವೇಳೆಯೇ 15 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೊಲಗಳಲ್ಲಿ ಬೆಳೆಗಿಂತ ಕಳೆಯೇ ಹೆಚ್ಚಾಗಿ ಬೆಳೆಯುವ ಮೂಲಕ ಅನ್ನದಾತರಿಗೆ ಆಘಾತ ನೀಡಿದೆ.
ಈ ಮಳೆಯಿಂದಾಗಿ ಒಣಬೇಸಾಯ ಮತ್ತು ನೀರಾವರಿ ಪ್ರದೇಶದ ಜಮೀನುಗಳಲ್ಲಿ ಸೂರ್ಯಕಾಂತಿ, ಹತ್ತಿ, ತೊಗರಿ, ಸಜ್ಜೆ ಬೆಳೆಗಳು ವೇಗವಾಗಿ ಬೆಳೆಯುತ್ತಿರುವ ಹೊತ್ತಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಎಲ್ಲ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡ ಕಾರಣ ಜಮೀನುಗಳಲ್ಲಿ ಇಗಳಿ, ಗರಿಕೆ ಮತ್ತು ಇನ್ನಿತರ ಕಸ (ಕಳೆ) ಬೆಳೆಗಳ ಸಾಲಿನಲ್ಲಿ ಬೆಳೆಗಿಂತ ವೇಗವಾಗಿ ಬೆಳೆದು ನಿಂತಿದ್ದು ಇದರಿಂದ ರೈತರು ಆಘಾತಕ್ಕೊಳಗಾಗಿದ್ದಾರೆ. ಸಧ್ಯದ ಸ್ಥಿತಿಯಲ್ಲಿ ಮಳೆ ಕಡಿಮೆಯಾದರೂ ಕೂಡಾ ಭೂಮಿಯಲ್ಲಿನ ತೇವಾಂಶ ಕಡಿಮೆಯಾಗದ ಕಾರಣ ಜಮೀನುಗಳಲ್ಲಿ ಕಾಲಿಡಲು ಕೂಡಾ ಸಾಧ್ಯವಾಗದಂತ ಸ್ಥಿತಿ ನಿಮರ್ಾಣವಾಗಿದೆ.
ನಿತ್ಯ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬೆಳೆಗಳ ಕುಂಠಿತವಾಗಿದೆ. ಬೆಳೆಗಿಂತ ಅಧಿಕ ಕಳೆ ಬೆಳೆಯುತ್ತಿರುವುದರಿಂದ ಬೆಳೆಗಳ ಬೆಳವಣಿಗೆಗೆ ಇದು ಕುಂಠಿತವಾಗಿದ್ದು, ಅಲ್ಲದೆ ಬೆಳೆಗೆ ಕೀಟ ಬಾಧೆ ಕೂಡ ಕಾಡುತ್ತಿದೆ ಎಂದು ರೈತ ರಾಮು ಜಂಗಳಿ ತಮ್ಮ ಅಳಲು ತೊಡಿಕೊಂಡಿದ್ದಾರೆ. ಇದೇ ರೀತಿ ಮಳೆ ಮುಂದುವರಿದರೆ ಯಾವ ಬೆಳೆಯೂ ಬೆಳೆಯುವುದು ಕಷ್ಟ ಎನ್ನುತ್ತಾರೆ.
ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕೃಷಿ ಕೂಲಿ ಕಾಮರ್ಿಕರ ಕೊರತೆ ಕೂಡ ಎದುರಾಗಿದ್ದು, ಮಹಿಳಾ ಕೂಲಿ ಕಾಮರ್ಿಕರಿಗೆ ನಿತ್ಯ 150ರಿಂದ 200 ನೀಡಿದರೂ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಹಾಗೊಂದು ವೇಳೆ ಬರಲು ಒಪ್ಪಿದರೆ ಅವನ್ನು ಕರೆದುಕೊಂಡು ಮತ್ತು ಮನೆಗೆ ಹೋಗುವ ವೇಳೆ ವಾಹನದ ವ್ಯವಸ್ಥೆ ಮಾಡಬೇಕು. ಇದು ರೈತರಿಗೆ ಮತ್ತಷ್ಟು ಭಾರವಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ರೈತ ಹವಾಮಾನದೊಂದಿಗೆ ಜೂಜಾಟವಾಡಿದಂತಾಗಿದೆ.