ನರಗುಂದ: ಭೂಕುಸಿತದ ಗುಂಡಿಯೊಳಗೆ ಬಿದ್ದು ಸಂಕಷ್ಟಕ್ಕೆ ಸಿಲುಕಿದ್ದ ಎತ್ತನ್ನು ಅಗ್ನಿಶಾಮಕ ಅಧಿಕಾರಿಗಳು ಕಾರ್ಯಾಚರಣೆ ನಡೆಸುವ ಮೂಲಕ ಸುರಕ್ಷಿತವಾಗಿ ರಕ್ಷಿಸಿದ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ಪಟ್ಟಣದ ಕುರುಬಗೇರಿ ಬಡಾವಣೆಯ ಹನುಮಂತಪ್ಪ ಯಮನಪ್ಪ ಕತ್ತಿ (ಗಂಗಾಪೂರ) ಎಂಬುವರ ಎತ್ತನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಎತ್ತು ಚಕ್ಕಡಿಯೊಂದಿಗೆ ಶುಕ್ರವಾರ ಬೆಳಗ್ಗೆ ಹೊಲಕ್ಕೆ ತೆರಳಿ ಸಂಜೆ ವಾಪಸಾಗಿ ಮಸೂತಿ ಆವರಣದಲ್ಲಿ ಚಕ್ಕಡಿಯಿಂದ ಎತ್ತಿನ ಕೊರಳು ಬಿಚ್ಚಿದ್ದಾರೆ. ಈ ವೇಳೆ ಎಡಗಡೆಯ ಎತ್ತು ಬಾಬು ವಾಗ್ಮೋಡೆ ಎಂಬುವರ ಪಾಳು ಬಿದ್ದ ಮನೆ ಗೋಡೆ ಪಕ್ಕ ಬರುವಾಗ ಏಕಾಏಕಿ ನೆಲ ಕುಸಿದಿದ್ದರಿಂದ ನೀರು ಸಂಗ್ರಹಗೊಂಡಿದ್ದ ಬೃಹತ್ ಗುಂಡಿಯೊಳಗೆ ಎತ್ತು ಸಿಲುಕಿಕೊಂಡಿತು.
ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಒಂದೂವರೆ ಗಂಟೆ ಕಾಲ ಕಾರ್ಯಾಚರಣೆ ನಡೆಸುವ ಮೂಲಕ ಗುಂಡಿಯಲ್ಲಿ ಬಿದ್ದ ಎತ್ತನ್ನು ಸುರಕ್ಷಿತವಾಗಿ ಹೊರಗೆ ತೆಗೆದರು.
ಲಾಠಿ ಬೀಸಿದರೂ ಬಗ್ಗದ ಜನ
ಲಾಕ್ಡೌನ್ ಆದೇಶವಿದ್ದರೂ ಭೂಕುಸಿತದ ಗುಂಡಿಯಲ್ಲಿ ಸಿಲುಕಿದ್ದ ಎತ್ತು ನೋಡಲು ಬಡಾವಣೆಯ ಜನರು ನೂರಾರು ಸಂಖ್ಯೆಯಲ್ಲಿ ನೆರೆದಿದ್ದರು. ಇದರಿಂದ ರಕ್ಷಣಾ ಕಾರ್ಯಕ್ಕೆ ತೊಂದರೆಯಾದ ಹಿನ್ನೆಲೆ, ಪೊಲೀಸ್ ಅಧಿಕಾರಿಗಳು ಎರಡ್ಮೂರು ಬಾರಿ ಲಘು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು. ಇದಕ್ಕೂ ಬಗ್ಗದ ಸಾರ್ವಜನಿಕರು ಮನೆಯ ಮಹಡಿಯಿಂದಲೇ ಗುಂಡಿಯಲ್ಲಿ ಬಿದ್ದ ಎತ್ತನ್ನು ಹೊರಗೆ ತೆಗೆಯುವ ಕಾರ್ಯಾಚರಣೆ ವೀಕ್ಷಿಸಿದರು.