ವಿಜಯಪುರ: ಕಾರ್ ಪಾರ್ಕಿಂಗ್ ವಿಷಯದಲ್ಲಿ ಬಿಜೆಪಿ ಮುಖಂಡ ಹಾಗೂ ಕಾಂಗ್ರೆಸ್ ನ ವಿಧಾನ ಪರಿಷತ್ ಸದಸ್ಯನ ನಡುವೆ ಉಂಟಾಗಿರುವ ಜಗಳ ಇದೀಗ ವಿಕೋಪಕ್ಕೆ ತಲುಪಿದ್ದು, ಜೀವ ಬೆದರಿಕೆ, ಭಯೋತ್ಪಾದನೆ ನಂಟು, ಗಾಂಜಾ- ಅಫೀಮು ವಹಿವಾಟಿನ ಆರೋಪ ಪ್ರತ್ಯಾರೋಪದವರೆಗೂ ಬಂದು ನಿಂತಿದೆ !
ಬಿಜೆಪಿಯ ಮುಖಂಡ ಹಾಗೂ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲರು ತಮ್ಮ ಮೇಲೆ ಸುನೀಲಗೌಡ ಪಾಟೀಲರಿಂದ ಜೀವ ಬೆದರಿಕೆ ಇದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ವಿಪ ಸದಸ್ಯ ಸುನೀಲಗೌಡ ಪಾಟೀಲ ಕೂಡ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಅಂಥದ್ದೇ ಆರೋಪ ಮಾಡಿದ್ದಾರೆ.
ಏ. 28 ರಂದು ಮದುವೆ ಸಮಾರಂಭದಲ್ಲಿ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಜೊತೆ ಬಂದ ಸರ್ದಾರ್ ಜಿ ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ. ಈ ಘಟನೆ ಹಿಂದೆ ದೊಡ್ಡ ಹುನ್ನಾರ ಅಡಗಿದೆ. ಈ ಸರ್ದಾರ್ ಜಿ ಯಾರು? ಚುನಾವಣೆ ಸಂದರ್ಭ
ಆತನ ಬಳಿ ಗನ್ ಹೇಗೆ ಬಂತು? ಜಿಲ್ಲೆಗೂ ಈ ಸರ್ದಾರ್ ಜಿಗೂ ಇರುವ ನಂಟೇನು? ಎಂದಿರುವ ಸುನೀಲಗೌಡರು, ನನಗಿರುವ ಮಾಹಿತಿ ಪ್ರಕಾರ ಇಂಥ ಹಲವು ಸರ್ದಾರ್ ಜಿಗಳು ವಿಜಯಪುರದಲ್ಲಿ ಬಾಡಿಗೆ ಮನೆ ಮಾಡಿ ಕೊಂಡಿದ್ದಾರೆ. ವಿಜುಗೌಡರು ಇವರನ್ನು ಇರಿಸಿಕೊಂಡಿದ್ದಾರೆ. ಈ ಸರ್ದಾರ್ ಜಿಗಳಿಗೂ ಟೆರಿರಿಸ್ಟ್ ಗಳಿಗೆನಾದರೂ ಲಿಂಕ್ ಇದೆಯಾ? ಅಲ್ಲದೇ ಈ ವಿಜುಗೌಡರು ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ, ಅಫೀಮು, ಸಿಮ್ ಕಾರ್ಡ್ ಸಪ್ಲಾಯ್ ಮಾಡುತ್ತಾರೆಂಬ ಮಾಹಿತಿ ಇದೆ.
ಈ ಬಗ್ಗೆ ತನಿಖೆ ಆಗಬೇಕೆಂದು ಆಗ್ರಹಿಸುವುದಾಗಿಯೂ, ತಮಗಿರುವ ಜೀವ ಬೆದರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆಯೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾಗಿ ಸುನೀಲಗೌಡ ರು ತಿಳಿಸಿದರು.