ಬೆಳಗಾವಿ: ಮಹಿಳೆಯರು ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಸಾಧಕ ಮಹಿಳೆಯರನ್ನು ನೆನೆಯಬೇಕಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ ಹೇಳಿದರು.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸ್ಫೂರ್ತಿ ಸೋಷಿಯಲ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಮಹಾಂತೇಶ ನಗರ ಮಹಾಂತ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶಕ್ಕಾಗಿ ಕಿತ್ತೂರು ಚನ್ನಮ್ಮ ಪ್ರಾಣ ತ್ಯಾಗ ಮಾಡಿದ್ದಾಳೆ. ಅಕ್ಕಮಹಾದೇವಿ ವಚನಗಳ ಮೂಲಕ ಸಮಾಜ ಸುಧಾರಿಸಿದ್ದಾರೆ. ಇಂತಹ ಅನೇಕ ಮಹಿಳಾ ಸಾಧಕಿಯರ ಬಗ್ಗೆ ಪಠ್ಯದಲ್ಲಿ ಅಳವಡಿಸಲಾಗಿದೆ. ಶಿಕ್ಷಣ, ಸಮಾಜ ಸೇವೆ ಸೇರಿ ವಿವಿಧ ರಂಗಗಳಲ್ಲಿ ಹಲವಾರು ಮಹಿಳೆಯರು ಶ್ರಮಿಸಿದ್ದಾರೆ. ಅವರ ಕಾರ್ಯಗಳನ್ನು ಎಲ್ಲರೂ ಸ್ಮರಿಸಬೇಕಿದೆ ಎಂದರು.
ರಾಜಾರಾಮ ಮೋಹನರಾಯ, ಡಾ.ಬಿ.ಆರ್.ಅಂಬೇಡ್ಕರ್ ಸೇರಿ ಹಲವು ಮಹಾಪುರುಷರು ಮಹಿಳಾ ಸಮಾನತೆಗಾಗಿ ಹೋರಾಡಿದ್ದರು. ಅದರ ಪ್ರತಿಫಲವಾಗಿ ಮಹಿಳೆಯರು ಸಮಾನತೆ ಸಾಧಿಸುತ್ತಿದ್ದಾರೆ. ಎಲ್ಲ ರಂಗಗಳಲ್ಲಿ ಮಹಿಳೆಯರು ಮುನ್ನೆಲೆಗೆ ಬರುತ್ತಿದ್ದಾಳೆ. ಮನೆಯಲ್ಲಿರುವ ಸಾಮಾನ್ಯ ಮಹಿಳೆಯೂ ಒಂದಿಲ್ಲ ಒಂದು ರೀತಿಯಲ್ಲಿ ಸಮಾಜದ ಶಕ್ತಿಯಾಗಿದ್ದು, ಅವರಿಗೆ ಗೌರವ ಕೊಡಬೇಕು ಎಂದರು.
ಸ್ಫೂರ್ತಿ ಸೋಷಿಯಲ್ ವೆಲ್ಫೇರ್ ಅಸೋಸಿಯೇಷನ್ ಸಮಜಮುಖಿ ಸೇವೆ ಮಾಡುತ್ತಿದೆ. ಮಹಿಳಾ ಸಬಲೀಕರಣದಲ್ಲಿ ತೊಡಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಮಹಿಳೆಯರಿಗೆ ಇರುವ ಸರ್ಕಾರಿ ಯೋಜನೆ ತಲುಪಿಸುವುದಕ್ಕೆ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ವಿಜಯಕಾಂತ ಡೈರಿ ಆ್ಯಂಡ್ ಫುಡ್ ಪ್ರಾಡಕ್ಟ್ ನಿರ್ದೇಶಕಿ ದೀಪಾ ಶಿವಕಾಂತ ಸಿದ್ನಾಳ ಕಾರ್ಯಕ್ರಮ ಉದ್ಘಾಟಿಸಿದರು. ಉಮಾ ಸಾಲಿಗೌಡರ, ದೀಪಾ ಶಿವಕಾಂತ ಸಿದ್ನಾಳ ಅವರನ್ನು ಸನ್ಮಾನಿಸಲಾಯಿತು. ಅಸೋಸಿಯೇಷನ್ ಅಧ್ಯಕ್ಷೆ ಜ್ಯೋತಿ ಭಾವಿಕಟ್ಟಿ, ರಾಜೇಶ್ವರಿ ಪಾಟೀಲ, ಸುಜಾತ ಮತ್ತಿಕಟ್ಟಿ, ವಿಜಯಲಕ್ಷ್ಮೀ ಮಣ್ಣಿಕೇರಿ, ಶ್ವೇತಾ ಪಾಟೀಲ ಇದ್ದರು. ರತ್ನಪ್ರಭಾ ಬೆಲ್ಲದ ಉಪಸ್ಥಿತರಿದ್ದರು.
ಶ್ರೀದೇವಿ ನರಗುಂದ ಸ್ವಾಗತಿಸಿದರು. ರಾಜೇಶ್ವರಿ ಹಿರೇಮಠ ನಿರೂಪಿಸಿದರು.