ಚಿತ್ರದುರ್ಗ: ರಾಜ್ಯದಲ್ಲಿ ಬಡವರ ಪರ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಒಟ್ಟು ಜನಸಂಖ್ಯೆಯಲ್ಲಿ 4.5 ಕೋಟಿ ಜನ ಗ್ಯಾರಂಟಿ ಯೋಜನೆಗಳ ಪೈಕಿ ಒಂದಲ್ಲೊಂದು ರೀತಿ ಪ್ರಯೋಜನ ಪಡೆಯುತ್ತಿದ್ದಾರೆ. ಇವೇ ನಮ್ಮ ಅಭ್ಯರ್ಥಿಗಳ ಕೈ ಹಿಡಿಯಲಿವೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಎನ್ಬಿಟಿ ಭವನದ ಆವರಣದಲ್ಲಿ ಶುಕ್ರವಾರ ಇಲ್ಲಿನ ಲೋಕಸಭಾ ಕ್ಷೇತ್ರದ ಮಾದಿಗ ಸಮುದಾಯದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ರೈತರ ಸಾಲ ಮನ್ನಾ ಮಾಡದೆಯೇ ಶ್ರೀಮಂತರ ಕೋಟ್ಯಂತರ ರೂ. ಸಾಲ ಮನ್ನಾ ಮಾಡಿದೆ. ಬಡವರು, ಅನ್ನದಾತರಿಗೆ ಆ ಪಕ್ಷದ ಕೊಡುಗೆ ಏನು ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಭಾರತದಲ್ಲಿ ಬೆಲೆ ಏರಿಕೆ, ಕೋಮು ಗಲಭೆಗಳು ಹೆಚ್ಚಾಗಿವೆ. ಆದರೆ, ಸ್ವಾತಂತ್ರೃ ನಂತರ 50ಕ್ಕಿಂತ ಹೆಚ್ಚು ವರ್ಷ ದೇಶವನ್ನಾಳಿದ ಕಾಂಗ್ರೆಸ್ ಸರ್ವ ಧರ್ಮವನ್ನು ಒಟ್ಟಾಗಿ ಕೊಂಡೊಯ್ಯುವ ಕೆಲಸದೊಂದಿಗೆ ಅಭಿವೃದ್ಧಿ ಮಾಡಿದೆ. ಆದ್ದರಿಂದ ಶಾಂತಿ-ಸೌಹಾರ್ದ ವಾತಾವರಣ ನೆಲೆಸಲು ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು.
ಕ್ಷೇತ್ರದ ಕೈ ಅಭ್ಯರ್ಥಿ ಚಂದ್ರಪ್ಪ ಸಜ್ಜನ. ಗೆದ್ದಾಗಲೂ, ಸೋತಾಗಲೂ ಇಲ್ಲಿನ ಜನರೊಂದಿಗೆ ನಿಕಟಸಂಪರ್ಕ ಹೊಂದಿ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಈ ಕ್ಷೇತ್ರದಿಂದಲೇ ಗೆಲುವಿನ ಖಾತೆ ತೆರೆಯುವ ಮೂಲಕ 28 ಕ್ಷೇತ್ರವೂ ಜಯಗಳಿಸುವ ಆಶಾಭಾವನೆ ಹೊಂದಿದ್ದೇನೆ ಎಂದರು.
ಕೇಂದ್ರ ಸರ್ಕಾರ ಬರ ಪರಿಹಾರವನ್ನೇ ನೀಡಿಲ್ಲ. ಇನ್ನೂ ಗೃಹಲಕ್ಷ್ಮಿ ಯೋಜನೆಗೆ ಕೇಂದ್ರದ ಹಣ ದುರ್ಬಳಕೆ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಮಾತು ಹಾಸ್ಯಾಸ್ಪದವಾಗಿದೆ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಅಧಿಕಾರದಲ್ಲಿ ಇರುವವರೆಗೂ ನೀಡಲಿದ್ದೇವೆ ಎಂದು ಹೇಳಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಮಾದಿಗ ಸಮುದಾಯದವರು ರಾಜಕೀಯ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬರಬೇಕು. ಆದ್ದರಿಂದ ಸಮಾಜದ ಪರವಿರುವ ಕಾಂಗ್ರೆಸ್ ಅಭ್ಯರ್ಥಿಯನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲು ನಾವೆಲ್ಲರೂ ಶ್ರಮಿಸೋಣ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ, ಜಿಲ್ಲಾಧ್ಯಕ್ಷ ಎಂ.ಕೆ.ತಾಜ್ಪೀರ್, ಮುಖಂಡರಾದ ಗೋಪಾಲಕೃಷ್ಣ, ಜಿ.ಎಸ್.ಮಂಜುನಾಥ್, ಓ.ಶಂಕರ್, ಡಿ.ಎನ್.ಮೈಲಾರಪ್ಪ, ಆರ್.ನರಸಿಂಹರಾಜು, ಜಿ.ಎಲ್.ಮೂರ್ತಿ, ಪಾಂಡುರಂಗಸ್ವಾಮಿ, ವೀರಭದ್ರಪ್ಪ, ರಂಗಸ್ವಾಮಿ, ಮಲ್ಲೇಶಪ್ಪ, ತಿಪ್ಪಮ್ಮ, ಗೀತಮ್ಮ, ಸುಜಾತಮ್ಮ, ಎಂ.ಡಿ.ರವಿ, ಬಿ.ಪಿ.ತಿಪ್ಪೇಸ್ವಾಮಿ, ಹರೀಶ್, ಶಂಕರ್, ಜಯಣ್ಣ, ಕೆ.ಕುಮಾರ್, ಬಿ.ಪಿ.ಪ್ರಕಾಶ್ಮೂರ್ತಿ ಇತರರಿದ್ದರು.