ಹುಬ್ಬಳ್ಳಿ: ಕರ್ತವ್ಯನಿರತ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರ ಮೇಲೆ ಪೊಲೀಸರು ಲಾಠಿಯಿಂದ ಹಲ್ಲೆ ನಡೆಸಿದ ಘಟನೆ ಹಳೇಹುಬ್ಬಳ್ಳಿಯ ಆನಂದ ನಗರ ಬಳಿ ಬುಧವಾರ ನಡೆದಿದೆ.
ಮಹಾನಗರ ಪಾಲಿಕೆ ವಲಯ ಕಚೇರಿ 9ರ ಸಹಾಯಕ ಕಂದಾಯ ಅಧಿಕಾರಿ ಎನ್.ಕೆ. ಅಂಗಡಿ ಹಲ್ಲೆಗೀಡಾದವರು.
ಕೆಎಂಎಫ್ನಿಂದ ಪೂರೈಸಿದ್ದ ಉಚಿತ ಹಾಲನ್ನು ಕೊಳಚೆ ಪ್ರದೇಶಗಳಿಗೆ ಹಂಚಲು ತೆರಳುತ್ತಿದ್ದಾಗ ಆನಂದ ನಗರ ರಸ್ತೆ ಹೆಗ್ಗೇರಿ ಕ್ರಾಸ್ ಬಳಿ ಅಂಗಡಿ ಅವರನ್ನು ಪಿಎಸ್ಐ ಒಬ್ಬರು ತಡೆದರು. ಲಾಕ್ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ತಿರುಗದಂತೆ ಬೆದರಿಸಿದ ಪಿಎಸ್ಐಗೆ ಪಾಲಿಕೆ ಅಧಿಕಾರಿ ತಮ್ಮ ಬಳಿ ಇದ್ದ ತುರ್ತು ಸೇವೆಯ ಪಾಸ್ ತೋರಿಸಿ, ಉಚಿತ ಹಾಲು ವಿತರಿಸಲು ತೆರಳುತ್ತಿರುವುದಾಗಿ ತಿಳಿಸಿದರು. ಆದಾಗ್ಯೂ ಪಿಎಸ್ಐ ಲಾಠಿಯಿಂದ ಅವರ ಬೆನ್ನು ಹಾಗೂ ದೇಹದ ಇತರ ಭಾಗಗಳಿಗೆ ಹೊಡೆದಿದ್ದಾರೆ ಎಂದು ದೂರಲಾಗಿದೆ. ಮಹಾನಗರ ಪಾಲಿಕೆ ಬಗ್ಗೆಯೂ ಎಸ್ಐ ಅವಹೇಳನಕಾರಿಯಾಗಿ ಮಾತನಾಡಿದ್ದಾರೆನ್ನಲಾಗಿದೆ.
ಆಯುಕ್ತರಿಗೆ ಮನವಿ: ಪಾಲಿಕೆ ಅಧಿಕಾರಿಗೆ ಪೊಲೀಸ್ ಅಧಿಕಾರಿ ಥಳಿಸಿದ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಪಾಲಿಕೆ ನೌಕರರು ಆಯುಕ್ತರ ಕಚೇರಿ ಎದುರು ಸೇರಿ, ಘಟನೆಯನ್ನು ಖಂಡಿಸಿದರು. ಕೆಲಕಾಲ ಮೌನ ಪ್ರತಿಭಟನೆ ನಡೆಸಿದರು.
ಕರ್ತವ್ಯ ನಿರತ ಪಾಲಿಕೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಪಿಎಸ್ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ನೌಕರರ ಸಂಘದಿಂದ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಆಯುಕ್ತ ಡಾ. ಸುರೇಶ ಇಟ್ನಾಳ, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರೊಂದಿಗೆ ರ್ಚಚಿಸಲಾಗುವುದು. ಅಗತ್ಯ ರಕ್ಷಣೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದ ವಿವಿಧ ಮಹಾನಗರ ಪಾಲಿಕೆ ನೌಕರರ ಸಂಘಟನೆಗಳು ಸಹ ಪಾಲಿಕೆ ಸಿಬ್ಬಂದಿ ಮೇಲೆ ಪೊಲೀಸ್ ಅಧಿಕಾರಿ ನಡೆಸಿದ ಹಲ್ಲೆಯನ್ನು ಖಂಡಿಸಿವೆ. ಘಟನೆಗೆ ಸಂಬಂಧಿಸಿ ರಾಜ್ಯಾದ್ಯಂತ ಒಂದು ದಿನ ಸಾಂಕೇತಿಕ ಪ್ರತಿಭಟನೆ ನಡೆಸುವ ಕುರಿತು ರ್ಚಚಿಸಲಾಗುತ್ತಿದೆ. | ಪ್ರಸಾದ ಪೆರೂರ, ಅಧ್ಯಕ್ಷ, ಹು-ಧಾ ಮಹಾನಗರ ಪಾಲಿಕೆ ನೌಕರರ ಸಂಘ