ಆಯನೂರು: ನಾಡಿನ ಉಜ್ವಲವಾದ ಭವಿಷ್ಯ ಮಕ್ಕಳ ಕೈಯಲ್ಲಿದೆ. ಮಕ್ಕಳಿಗೆ ಒಳ್ಳೆಯ ವಿದ್ಯೆ ಹಾಗೂ ಉತ್ತಮ ಸಂಸ್ಕಾರದ ಜತೆಗೆ ಮೌಲ್ಯಗಳನ್ನು ನೀಡಬೇಕು ಎಂದು ಅಪರ ಜಿಲ್ಲಾಧಿಕಾರ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ನೇತೃತ್ವದ ಪರಿಸರ ಪ್ರೇಮ ತಂಡದಿಂದ ಭಾನುವಾರ ಹಾರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 45ನೇ ಸುಣ್ಣ ಹೊಡೆಯುವ ಹಾಗೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಭಾಗದ ಜನರಲ್ಲಿ ಸ್ವಚ್ಛತೆಯ ಬಗ್ಗೆ ಪರಿಕಲ್ಪನೆ ಮೂಡಬೇಕು. ನಮ್ಮ ಗ್ರಾಮ ನಮ್ಮ ಶಾಲೆ ಎಂಬ ಸಂದೇಶ ಸಾರುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಅವರು, ಶಾಲೆಯ ಆವರಣದಲ್ಲಿ ಬಾಟಲಿಗಳು, ಗುಟ್ಕಾ, ಗಾಜಿನ ಬಾಟಲಿ, ಹಳೆಯ ಚಪ್ಪಲಿ ಹೀಗೆ ಕಸದ ರಾಶಿ ಕಂಡು ವಿಷಾದ ವ್ಯಕ್ತಪಡಿಸಿದರು. ಜತೆ ತಾವೇ ಕೈಯಿಂದ ತೆಗೆದು ಕಸದ ವಾಹನಕ್ಕೆ ಹಾಕಿದರು. ದೊಡ್ಡ ಅಧಿಕಾರಿ ಎಂಬ ಅಹಂ ಇಲ್ಲದೇ ಜನಸಾಮಾನ್ಯರಂತೆ ಸ್ವಚ್ಛತೆ ಮಾಡಿದ್ದೂ ಅಲ್ಲದೇ ಬೊಂಬೆ ಹೇಳುತೈತೆ, ನೀನೇ ರಾಜಕುಮಾರ ಹಾಗೂ ಸ್ನೇಹಿತರೇ ನಿಮಗೆ ಸ್ವಾಗತ ಎಂಬ ಹಾಡುಗಳನ್ನ ಹಾಡಿ ಮನರಂಜನೆ ನೀಡಿದರು.
ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿ, ನಮ್ಮ ತಂಡದಿಂದ ಜಿಲ್ಲೆಯಲ್ಲಿ ಇದು 45 ನೇ ಕಾರ್ಯಕ್ರಮವಾಗಿದೆ. ಕೆಲವು ಜನ ಸಮಾನ ಮನಸ್ಕರು ಸೇರಿಕೊಂಡು ಪ್ರತಿ ಭಾನುವಾರ ಬಿಡುವು ಮಾಡಿಕೊಂಡು ಸರ್ಕಾರಿ ಶಾಲೆ, ಅಂಗನವಾಡಿ ಹೀಗೆ ಬೇರೆ ಬೇರೆ ಕಟ್ಟಡಗಳಿಗೆ ಸುಣ್ಣ ಬಣ್ಣ ಹೊಡೆಯುವುದಾಗಿ ಹೇಳಿದರು.
ಆರೋಗ್ಯ ತಪಾಸಣೆ ನಡೆಸಲಾಯಿತು. ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಹಿಳೆಯರಿಗೆ ಆಟೋಟಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.