ಮುನವಳ್ಳಿ: ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಲಕ್ಷಾಂತರ ಕುಟುಂಬ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಜನರ ಮೂಲಭೂತ ಅವಶ್ಯಕತೆ ಪೂರೈಸುತ್ತಿರುವ ಇಂಥ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಡಾ. ವೀರೇಂದ್ರ ಹೆಗ್ಗಡೆ ಅವರ ಸಾಧನೆ ಶ್ಲಾಘನೀಯ ಎಂದು ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸವದತ್ತಿ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಮುನವಳ್ಳಿ ಇವರ ಅಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಂಧೋಗಿಯ ನಿತ್ಯಾನಂದ ಆಶ್ರಮದ ಮುಕ್ತಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಹೊಂದುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾತ್ರ ಹಿರಿದಾಗಿದೆ ಎಂದರು.
ಮಾಜಿ ಪುರಸಭೆ ಅಧ್ಯಕ್ಷ ವಿಜಯ ಅಮಠೆ ಅಧ್ಯಕ್ಷತೆ ವಹಿಸಿದ್ದರು. ಎಂ.ಆರ್. ಗೋಪಶೆಟ್ಟಿ, ರಮೇಶ ಗೋಮಾಡಿ, ದುಂಡಪ್ಪ ಬುರ್ಜಿ, ಯೋಜನಾಧಿಕಾರಿ ದೇವೇಂದ್ರ ಕರಿಗಾರ, ಮೇಲ್ವಿಚಾರಕಿ ಶ್ರೀದೇವಿ ಸಣ್ಣಕ್ಕಿ, ಕಲ್ಮೇಶ ಚುಳಕಿ, ಕಾವ್ಯಾ ನಾಳ್ವಪರೋಶಿ, ಅಶ್ವಿನಿ ಹೊಸೂರ, ಶಿವಕುಮಾರ ಹಿರೇಮಠ, ಸುಮಿತ್ರಾ ಹಾವಿನ, ಇಂದಿರಾ ಕದಂ ಇತರರು ಇದ್ದರು.