ಮೈಸೂರು : ಪಿರಿಯಾಪಟ್ಟಣ ತಾಲೂಕಿನ ಕೆಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗಗಳನ್ನು ತೆರವುಗೊಳಿಸುವಲ್ಲಿ ತಹಸೀಲ್ದಾರ್ ವಿಫಲರಾಗಿದ್ದಾರೆ ಎಂದು ಆರೋಪಿಸಿ ತಾಲೂಕಿನ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದಸಂಸ ಮುಖಂಡ ಸಿ.ಎಸ್.ಜಗದೀಶ್ ಮಾತನಾಡಿ, ತಾಲೂಕಿನ ಹಾರನಹಳ್ಳಿ ಹೋಬಳಿ ಬೆಣಗಾಲು ಗ್ರಾಮದ ಸರ್ವೇ ನಂಬರ್ 42ರಲ್ಲಿ ಬಿಡಿಒ ಜಾಗ ಮತ್ತು ಆಶ್ರಯ ನಿವೇಶನಕ್ಕೆ ಮೀಸಲಿಟ್ಟ ಜಾಗವನ್ನು ಪಕ್ಕದ ಕಾಫಿ ಕ್ಯೂರಿಂಗ್ ವರ್ಕ್ಸ್ನಿಂದ ಒತ್ತುವರಿಯಾಗಿದೆ ಎಂದು ಈ ಹಿಂದೆ ತಹಸೀಲ್ದಾರ್ ಅವರಿಗೆ ದೂರು ಸಲ್ಲಿಸಲಾಗಿತ್ತು. ದೂರಿನನ್ವಯ ಸದರಿ ಜಾಗವನ್ನು ಸರ್ವೇ ಇಲಾಖೆಯಿಂದ ಅಳತೆ ಮಾಡಿಸಿ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸುವುದಕ್ಕಾಗಿ ಜು.5ರಂದು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಗ್ರಾಮಕ್ಕೆ ಬಂದ ಸರ್ವೇಯರ್ಗಳು ಜಾಗದ ಅಳತೆ ಮಾಡದೆ ಹಾಗೆಯೇ ಹಿಂದಿರುಗಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ ಪಿಟಿಸಿಎಲ್ ಕಾಯ್ದೆಯಡಿ ಭೂಮಿಗಳನ್ನು ಒತ್ತುವರಿ ಮಾಡಿಕೊಂಡಿದ್ದು ಯಾವುದೇ ಒತ್ತುವರಿ ತೆರವುಗೊಳಿಸದೆ ವಿಫಲರಾಗಿದ್ದಾರೆ ಎಂದು ಸಿ.ಎಸ್.ಜಗದೀಶ್ ದೂರಿದರು. ಈ ಸಂಬಂಧ ಒತ್ತುವರಿಯಾಗಿರುವ ಭೂಮಿಯನ್ನು ಶೀಘ್ರದಲ್ಲೇ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ದಸಂಸ ಮುಖಂಡರಾದ ದೊಡ್ಡಯ್ಯ, ಸುರೇಶ್, ದಾಸರಾಜು, ಗೊರಳ್ಳಿರಾಜಯ್ಯ, ಅಪ್ಪಾಜಿ, ನಾರಾಯಣ, ಅಶೋಕ್, ಲಕ್ಷ್ಮೀ ಬೂದಿತಿಟ್ಟು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.