ಕಾಳಗಿ: ರಟಕಲ್ನಲ್ಲಿರುವ ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಹಿಂದಿನ ಸರ್ಕಾರ 2 ಕೋಟಿ ರೂ. ಅನುದಾನ ನೀಡಿತ್ತು. ಆದರೆ ಇದೀಗ ಅಸ್ತಿತ್ವಕ್ಕೆ ಬಂದಿರುವ ಸರ್ಕಾರ ಅನುದಾನ ತಡೆಹಿಡಿದಿದ್ದು, ಕೂಡಲೇ ಬಿಡುಗಡೆ ಮಾಡಿ ಪುಣ್ಯಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಒತ್ತಾಯಿಸಿದರು.
ರೇವಗ್ಗಿ(ರಟಕಲ್) ಗ್ರಾಮದ ರೇವಣಸಿದ್ಧೇಶ್ವರ ಗುಡ್ಡದಲ್ಲಿ 51ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಮೂರ್ತಿಯನ್ನು ಸೋಮವಾರ ಲೋಕಾರ್ಪಣೆಗೊಳಿಸಿ ಮಾತನಾಡಿ, ಧಾರ್ಮಿಕ ಕ್ಷೇತ್ರಗಳಲ್ಲಿ ನೆಮ್ಮದಿ ಸಿಗುತ್ತದೆ. ಶ್ರದ್ಧೆ- ಭಕ್ತಿ ಹಾಗೂ ಶಿಸ್ತಿನಿಂದ ದೇವರ ಧ್ಯಾನ ಮಾಡಿದರೆ ಮುಕ್ತಿ ಸಿಗುತ್ತದೆ. ಮೂರ್ತಿ ಅನಾವರಣ ಸಮಯದಲ್ಲಿ ಮಳೆ ಬರುತ್ತಿರುವುದು ಶುಭ ಸಂಕೇತ. ವರುಣನ ಕೃಪೆಯಿಂದ ಉತ್ತಮ ಬೆಳೆ ಬೆಳೆದು, ಬೆಲೆ ಸಿಗುವ ಮೂಲಕ ರೈತನ ಮುಖದಲ್ಲಿ ಸಂತಸ ಮೂಡಲಿದೆ ಎಂದು ಹೇಳಿದರು.
ರೇವಣಸಿದ್ಧೇಶ್ವರ ಕ್ಷೇತ್ರದಲ್ಲಿ ಶಾಸ್ತ್ರೋಕ್ತವಾಗಿ ಧರ್ಮ ಕಾರ್ಯ ನಡೆಯಬೇಕು ಎಂಬ ಉದ್ದೇಶದಿಂದ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸ್ಥಾಪಿಸುವ ಆಶಯವನ್ನು ಸರ್ಕಾರದ ಗಮನಕ್ಕೆ ತಂದಿದ್ದೇವು. ಆದರೆ ಇಲ್ಲಿವರೆಗೂ ಯಾವುದೇ ನಿರ್ಧಾರ ಕೈಗೊಳ್ಳದಿರುವುದು ಬೇಸರ ತರಿಸಿದೆ. ಗುರುಕುಲ ನಿರ್ಮಾಣಕ್ಕೆ 5 ಎಕರೆ ಸ್ಥಳ ಬೇಕು, ಸರ್ಕಾರದಿಂದ ಎಷ್ಟು ಸಾಧ್ಯವೋ ಅಷ್ಟು ಜಮೀನು ನೀಡಲಿ. ಭಕ್ತರ ಸಹಕಾರದಿಂದ ಗುರುಕುಲ ಆರಂಭಿಸುತ್ತೇವೆ ಎಂದರು.
ಹೊನ್ನಕಿರಣಗಿಯ ಶ್ರೀ ಚಂದ್ರಗುಂಡ ಶಿವಾಚಾರ್ಯರು ಆಶಿರ್ವಚನ ನೀಡಿ, ರಟಕಲ್ನಲ್ಲಿನ ರೇವಣಸಿದ್ಧೇಶ್ವರ ದೇಗುಲದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಗುಡ್ಡದಲ್ಲಿ 51 ಅಡಿ ಎತ್ತರದ ರೇಣುಕಾಚಾರ್ಯ ಮೂರ್ತಿ ನಿರ್ಮಾಣದಲ್ಲಿ ಸಂಸದ ಡಾ.ಉಮೇಶ ಜಾಧವ್, ಶಾಸಕ ಡಾ.ಅವಿನಾಶ ಜಾಧವ್ ಅವರ ಶ್ರಮ ಹೆಚ್ಚಿದೆ ಎಂದು ಮೆಚ್ಚುಗೆ ವ್ಯಕ್ರಪಡಿಸಿದರು.