ಕುಮಟಾ: ಸಂಬಳವಿಲ್ಲದೇ ಪರದಾಡುತ್ತಿದ್ದ ಇಲ್ಲಿನ ತಾಲೂಕು ಆಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ಕಾರ್ಯ ನಿರ್ವಹಿಸುವ 7 ಸಿಬ್ಬಂದಿಗೆ ಶನಿವಾರ ತಲಾ 6 ಸಾವಿರದಂತೆ ಒಟ್ಟು 42 ಸಾವಿರ ರೂಪಾಯಿ ಸ್ವಂತ ಹಣದಿಂದ ಸಂಬಳ ವಿತರಿಸಿ, ಶಾಸಕ ದಿನಕರ ಶೆಟ್ಟಿ ಮಾನವೀಯತೆ ತೋರಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಡಯಾಲಿಸಿಸ್ ಘಟಕ ನಿರ್ವಹಿಸುವ ಕಂಪನಿಯಿಂದ ಈ ಸಮಸ್ಯೆಯಾಗಿದೆ. ಇತ್ತೀಚೆಗೆ ರೋಟರಿ ಕ್ಲಬ್ ನವರು ಡಯಾಲಿಸಿಸ್ ಘಟಕಕ್ಕೆ ಅಗತ್ಯವಿರುವ ಸಲಕರಣೆ ಒದಗಿಸಿದ್ದರು. ಇಲ್ಲಿ ಯಾವುದೇ ಸಮಸ್ಯೆ ಬಂದರೂ ಗಮನಕ್ಕೆ ತರಲು ವೈದ್ಯರಿಗೆ ಸೂಚಿಸಿದ್ದೆ. ಮೂರು ತಿಂಗಳಿಂದ ಸಂಬಳ ಇಲ್ಲದೆ ದುಡಿಯುತ್ತಿರುವ ಸಿಬ್ಬಂದಿಗೆ ಜೀವನ ನಿರ್ವಹಿಸಲು ಸ್ವಲ್ಪವಾದರೂ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ ಕೈಲಾದಷ್ಟು ಹಣ ನೀಡಿದ್ದೇನೆ ಎಂದರು.
ಡಯಾಲಿಸಿಸ್ ಘಟಕ ನಿರ್ವಹಣೆ ಹೊಣೆ ಹೊತ್ತಿದ್ದ ಬಿ.ಆರ್. ಶೆಟ್ಟಿ ಕಂಪನಿಯು ತನ್ನ ಜವಾಬ್ದಾರಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿಲ್ಲ. ಹಾಗಾಗಿ ರೋಗಿಗಳ ಸಮಸ್ಯೆ ನಿವಾರಿಸುವ ಸಲುವಾಗಿ ಇದರ ನಿರ್ವಹಣೆ ಜವಾಬ್ದಾರಿಯನ್ನು ಕೊಲ್ಕತಾ ಮೂಲದ ಕಂಪನಿಗೆ ನೀಡಲು ಯೋಚಿಸಿದ್ದೇವೆ. ಅವರು ಈಗಾಗಲೇ ರಾಜ್ಯದ 42 ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಡಾ. ಶ್ರೀನಿವಾಸ ನಾಯಕ, ಹೇಮಂತಕುಮಾರ ಗಾಂವಕರ, ವಿನೋದ ಪ್ರಭು, ವಿನಾಯಕ ನಾಯ್ಕ, ತುಳಸು ಗೌಡ ಇತರರಿದ್ದರು.