ಚಿಕ್ಕಮಗಳೂರು: ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ ಪ್ರತಿ ಹಳ್ಳಿಗೂ ಶುದ್ಧ ಕುಡಿಯುವ ನೀರು ಕೊಡುವ ಪ್ರಧಾನ ಮಂತ್ರಿಗಳ ಕನಸಿನ ಜಲಜೀವನ್ ಮಿಷನ್ ಯೋಜನೆಗೆ 1,452 ಕೋಟಿ ರೂ. ಮಂಜೂರಾಗಿ ಟೆಂಡರ್ ಕರೆಯಲಾಗಿದೆ. ಮೂರ್ನಾಲ್ಕು ದಿನದಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಬುಧವಾರ ತಾಲೂಕಿನ ಬೆಳವಾಡಿ ಕೆರೆಗೆ ಪತ್ನಿ ಪಲ್ಲವಿ, ವಿವಿಧ ಮಠಾಧೀಶರೊಂದಿಗೆ ಬಾಗಿನ ಅರ್ಪಿಸಿ ನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಈ ವರ್ಷ ನಮ್ಮ ಪ್ರಯತ್ನದ ಜತೆ ಭಗವಂತನ ಆಶೀರ್ವಾದದಿಂದ ಕೆರೆ ಬೇಗ ತುಂಬಿದೆ. ಇದರ ಜತೆಗೆ ದೇವನೂರು ಭಾಗದ ಕೆರೆಗೂ ಬಾಗಿನ ಬಿಡುವ ಸೌಭಾಗ್ಯ ದಯಪಾಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಮಲೆನಾಡಿನಲ್ಲಿ ಮಳೆಯಾದರೂ ಲಕ್ಕವಳ್ಳಿ ಡ್ಯಾಂ ತುಂಬಿ ಗೋಂದಿಯಿಂದ ನೀರು ಬರುತ್ತದೆ. ಗಿರಿಶ್ರೇಣಿ ಭಾಗದಲ್ಲಿ ಮಳೆಯಾದರೂ ಯಗಚಿ ನದಿಗೆ ನೀರು ಬಂದು ಆ ಮೂಲಕ ಕರಗಡ ಮತ್ತು ರಣಘಟ್ಟದಿಂದ ನೀರು ತರಬಹುದು. ಜತೆಗೆ ಈ ಭಾಗದಲ್ಲೂ ಮಳೆಯಾದರೆ ಬೇಗ ಕೆರೆ ತುಂಬುತ್ತದೆ. ಹಾಗಾಗಿ ಮೂರೂ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಒಂದಲ್ಲ ಒಂದು ಕಡೆಯಿಂದ ನೀರು ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಮಾಜಿ ಸದಸ್ಯ ಬೆಳವಾಡಿ ರವೀಂದ್ರ, ವಿಜಯ್ಕುಮಾರ್, ಶುಭಾ ಸತ್ಯಮೂರ್ತಿ, ಈಶ್ವರಹಳ್ಳಿ ಮಹೇಶ್, ಎಚ್.ಡಿ.ತಮ್ಮಯ್ಯ, ಎಂ.ಆರ್.ದೇವರಾಜ ಶೆಟ್ಟಿ, ಲಕ್ಯಾ ಈಶ್ವರ್, ಚಿಕ್ಕದೇವನೂರು ರವಿ, ಚಂದ್ರಶೇಖರ, ಬಸವರಾಜ್, ಬೀರೇಗೌಡ, ಶಿವೇಗೌಡ, ಗ್ರಾಪಂ ಉಪಾಧ್ಯಕ್ಷ ಪ್ರದೀಪ್ ಇದ್ದರು.