ಚಳ್ಳಕೆರೆ: ತಳ ಸಮುದಾಯಗಳ ಸಾಮಾಜಿಕ ಭದ್ರತೆಗೆ ಜಮೀನಿನ ಹಕ್ಕು ಬಾಧ್ಯತೆ ಉಳಿಯಬೇಕಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅಧಿವೇಶನದಲ್ಲಿ ಎಸ್ಸಿ-ಎಸ್ಟಿ ಜಮೀನುಗಳ ಭದ್ರತೆಗಾಗಿ ಪಿಟಿಸಿಎಲ್ ಕಾಯ್ದೆ ಜಾರಿ ಬಗ್ಗೆ ಚರ್ಚೆ ಸಂದರ್ಭ ಸರ್ಕಾರದ ಅಂಗೀಕಾರಕ್ಕೆ ಬೆಂಬಲಿಸಿದ ಅವರನ್ನು ಭಾನುವಾರ ನಗರದ ಶಾಸಕರ ಭವನದಲ್ಲಿ ಪಿಟಿಸಿಎಲ್ ಫಲಾನುಭವಿಗಳು ಗೌರವಿಸಿದ ಸಂದರ್ಭ ಮಾತನಾಡಿದರು.
ಸರ್ಕಾರದ ಅನುಮತಿ ಪಡೆಯದೆ ಎಸ್ಸಿ-ಎಸ್ಟಿ ಸಮುದಾಯಗಳ ಜಮೀನುಗಳನ್ನು ಪರಭಾರೆ ಮಾಡಿಕೊಳ್ಳಬಾರದು. ಇಂತಹ ಕಾಯ್ದೆ ರಕ್ಷಣೆ ಇದ್ದಲ್ಲಿ ಮಾತ್ರ ಶೋಷಿತ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ರಾಜ್ಯಾದ್ಯಂತ ಪಿಟಿಸಿಎಲ್ ಕಾಯ್ದೆ ಜಾರಿಗೆ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿರುವವರಿಗೆ ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯ ಕಲ್ಪಿಸಿದೆ ಎಂದು ಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷ ಬಿ.ಗುಜ್ಜಾರಪ್ಪ, ಪಿಟಿಸಿಎಲ್ ಫಲಾನುಭವಿಗಳಾದ ಸಿ.ಶಾಂತಕುಮಾರ್, ಚಂದ್ರು, ಪ್ರಕಾಶ್, ಟಿ.ಮಂಜುಳಮ್ಮ, ಮಣಿಕಂಠ, ತಿಮ್ಮಣ್ಣ, ಪಾಪಣ್ಣ ಮತ್ತಿತರರು ಇದ್ದರು.