ಬೀದರ್: ಜನಸಂಖ್ಯೆ ಹೆಚ್ಚಳದಿಂದ ಪ್ರಕೃತಿ ಮೇಲೆ ದುಷ್ಪರಿಣಾಮ ಉಂಟಾಗಲಿದ್ದು, ಜನತೆ ಎಚ್ಚೆತ್ತುಕೊಂಡು ಕುಟುಂಬ ಕಲ್ಯಾಣ ಯೋಜನೆ ವಿಧಾನಗಳನ್ನು ಉಪಯೋಗಿಸಿ ಕುಟುಂಬದ ಸ್ಥಿರತೆಯನ್ನು ಕಾಪಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ ಹೇಳಿದರು.
ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಗರದಲ್ಲಿ ಶನಿವಾರ ಹಮ್ಮಿಕೊಂಡ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಜನಸಂಖ್ಯೆ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಕೋರಿದರು.
ಡಿಎಚ್ಒ ಡಾ.ವಿ.ಜಿ. ರಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಜನಸಂದಣಿ ಹೆಚ್ಚುತ್ತಿದೆ. ಜನಸಂಖ್ಯೆ ಸಹ ಇದೇ ರೀತಿ ಹೆಚ್ಚುತ್ತ ಹೋದಲ್ಲಿ ಉಸಿರಾಡಲು ಶುದ್ಧ ಗಾಳಿ, ಕುಡಿಯಲು ನೀರು ಸಿಗುವುದು ಕಷ್ಟಕರವಾಗಲಿದೆ. ಕುಟುಂಬ ಕಲ್ಯಾಣ ವಿಧಾನಗಳಾದ ಶಸ್ತ್ರಚಿಕಿತ್ಸೆ, ಚುಚ್ಚುಮದ್ದುವಿನಂಥ ವಿಧಾನಗಳನ್ನು ಬಳಸಿ ಅನವಶ್ಯಕ ಗರ್ಭ ತಡೆಯಲು ಜನರ ಸಹಭಾಗಿತ್ವ ನೀಡಬೇಕು ಎಂದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಇಂದುಮತಿ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಅನವಶ್ಯಕ ಗರ್ಭ ಕಡಿಮೆಯಾದಲ್ಲಿ ತಾಯಿ ಮತ್ತು ಶಿಶು ಮರಣ ನಿಯಂತ್ರಿಸಬಹುದು ಎಂದು ಹೇಳಿದರು. ಡಾ.ಕೃಷ್ಣಾರಡ್ಡಿ ಲಕ್ಕಾ, ಡಾ.ರಾಜಶೇಖರ ಪಾಟೀಲ್, ಡಾ.ದೀಪಾ ಖಂಡ್ರೆ, ಸಂಗಪ್ಪ ಕಾಂಬ್ಳೆ, ಡಾ.ಲಕ್ಷ್ಮೀಕಾಂತ ವಲ್ಲೇಪುರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಿಬ್ಬಂದಿ ಇದ್ದರು. ಶ್ರಾವಣ ಜಾಧವ್ ನಿರೂಪಣೆ ಮಾಡಿದರು.