ಕುಲಗೋಡ: ಹಳೆಯ ತಾಮ್ರ, ಬೆಳ್ಳಿ, ಬಂಗಾರ ಆಭರಣವನ್ನು ಹೊಸದು ಮಾಡಿಕೊಡುತ್ತೇನೆ ಎಂದು ನಂಬಿಸಿ ಬಂಗಾರ ಬದಲು ಕಲ್ಲು ಕೊಟ್ಟು ಪರಾರಿಯಾದ ಘಟನೆ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಜನತಾ ಪ್ಲಾಟ್ನಲ್ಲಿ ಮಂಗಳವಾರ ನಡೆದಿದೆ.
ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಲಕ್ಕಪ್ಪ ಪೂಜೇರಿ ಎಂಬುವರ ಮನೆಗೆ ಬೈಕ್ ಮೇಲೆ ಆಗಮಿಸಿದ ಆಗಂತುಕ, ಸವಿತಾ ಲಕ್ಕಪ್ಪ ಪೂಜೇರಿ ಅವರಿಗೆ ಹಳೆಯ ತಾಮ್ರ, ಬೆಳ್ಳಿ, ಬಂಗಾರ ಆಭರಣ ಹೊಸದರಂತೆ ಹೊಳೆಯುವ ಹಾಗೆ ಮಾಡು ಕೊಡುತ್ತೇನೆ ಎಂದು ನಂಬಿಸಿದ್ದಾನೆ. ಸವಿತಾ ಮೊದಲಿಗೆ ತಾಮ್ರದ ಹಳೆಯ ಪಾತ್ರೆ ಕೊಟ್ಟು ತೊಳೆದು ತೋರಿಸುವಂತೆ ತಿಳಿಸಿದ್ದಾರೆ.
ಪಾತ್ರೆಯನ್ನು ತೊಳೆದು ಕೊಟ್ಟ ನಂತರ ಕೊರಳಿಲ್ಲಿದ್ದ 1 ತೊಲ ತೂಕದ ಮಂಗಳಸೂತ್ರ, 3 ತೊಲ ತೂಕದ ಅವಲಕ್ಕಿ ಚಿನ್ನದ ಸರ ಕೊಟ್ಟಿದ್ದಾರೆ. ತೊಳೆದ ನಂತರ ಆಭರಣ ಬದಲಿಗೆ ಪ್ಲಾಸ್ಟಿಕ್ ಕವರ್ನಲ್ಲಿ ಕಲ್ಲು ಮತ್ತು ಕೆಂಪು ಪೌಡರ್ ಕಟ್ಟಿಕೊಟ್ಟು 20 ನಿಮಿಷದ ನಂತರ ತೆಗೆದು ನೋಡುವಂತೆ ಹೇಳಿ ನಂಬಿಸಿ ಪರಾರಿಯಾಗಿದ್ದಾನೆ. ಆಭರಣಗಳ ಬೆಲೆ 2.40 ಲಕ್ಷ ರೂ.ಆಗಿದ್ದು, ಕುಲಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.