ತ್ಯಾಗರ್ತಿ: ಸಾರ್ವಜನಿಕರು ವಿವಿಧ ಸರ್ಕಾರಿ ಕೆಲಸಕ್ಕೆ ತಾಲೂಕು ಕಚೇರಿಗೆ ಅಲೆಯುವುದು ಬೇಡ. ಗ್ರಾಮ ಮಟ್ಟದಲ್ಲೇ ಸಮಸ್ಯೆ ಬಗೆಹರಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಸಾಗರ ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಹೇಳಿದರು.
ಕೊರ್ಲಿಕೊಪ್ಪ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ಯಾವುದೇ ಇಲಾಖೆಯ ಕೆಲಸಗಳಲ್ಲಿ ತೊಂದರೆಗಳು ಕಂಡುಬಂದಲ್ಲಿ ಕಂದಾಯ ಇಲಾಖೆ ಅಥವಾ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ನೀಡಬಹುದು. ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಅತಿವೃಷ್ಟಿ ಹಾನಿಯ ಮಾಹಿತಿ ನೀಡಿದರೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದರು.
ಗ್ರಾಮದಲ್ಲಿ ನಿರ್ಗತಿಕರಿಗೆ ವಸತಿ, ಬಗರ್ಹುಕುಂ ಜಮೀನು ಸಮಸ್ಯೆ, ಖಾತೆ ಬದಲಾವಣೆ, ಸ್ಮಶಾನ ಭೂಮಿ, ಭೂ ಒತ್ತುವರಿ, ಶೈಕ್ಷಣಿಕ ಚಟುವಟಿಕೆ, ರಸ್ತೆ ಅಭಿವೃದ್ಧಿ, ಆರೋಗ್ಯ, ನೈರ್ಮಲ್ಯ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ಸಭೆಗೆ ಗೈರಾದ ಅಧಿಕಾರಿಗಳ ಮಾಹಿತಿ ಪಡೆದರು. ಈ ಭಾಗದ ಅಂಗವಿಕಲರು, ರೈತರು ಮತ್ತು ಕೂಲಿಕಾರರ ಕುಂದುಕೊರತೆಗಳ ಮಾಹಿತಿ ಪಡೆದರು. ಪಿಂಚಣಿ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಯಿತು. ಸಭೆಯಲ್ಲಿ ಐವತ್ತಕ್ಕೂ ಹೆಚ್ಚು ನಾಗರಿಕರು ತಮ್ಮ ಸಮಸ್ಯೆ ಕುರಿತು ಲಿಖಿತ ಮನವಿ ನೀಡಿದರು. 20 ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯದ ಮಂಜೂರಾತಿ ಪತ್ರ ನೀಡಲಾಯಿತು.