ನಿರುಪದ್ರವಿ, ನಿರಪರಾಧಿ ತರುಣ ಹರ್ಷನ ಕೊಲೆಯಿಂದ ಆಘಾತಗೊಂಡು, ನೊಂದ ಕೋಟಿ ಕೋಟಿ ಕನ್ನಡಿಗರ, ಹಿಂದುಗಳ ಪರವಾಗಿ ಬರೆಯುತ್ತಿರುವ ಪತ್ರವಿದು. ಮಗನನ್ನು ವಿನಾಕಾರಣ ಕಳೆದುಕೊಂಡ ಕನ್ನಡದ ತಾಯಿಯೋರ್ವಳ ಹೃದಯ ಹಿಂಡುವ ವೇದನೆಯಿಂದ ಪ್ರೇರಿತವಾದ ಪತ್ರವಿದು.
ಹರ್ಷನ ಕೊಲೆಗಾರರಿಗೆ ಪರಪ್ಪನ ಅಗ್ರಹಾರದಲ್ಲಿ ಸಿಗುತ್ತಿರುವ ರಾಜಾತಿಥ್ಯದ ವಿಚಾರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇದನ್ನು ನೋಡಿ, ಕೇಳಿ, ಬಹಳ ಸಂತೋಷವಾಯಿತು. ಅಭಿಮಾನದಿಂದ ಹಿಂದೂ ಎಂದು ಹೇಳಿಕೊಂಡ ನವಯುವಕನನ್ನು ಕೋಮುದ್ವೇಷದ ದಳ್ಳುರಿಗೆ ನೂಕಿ ಪ್ರಾಣ ತೆಗೆದವರು ಎಷ್ಟು ನಿರಾಳವಾಗಿ, ಸಂತೋಷವಾಗಿ ಬದುಕುತ್ತಿದ್ದಾರೆ. ಇವರನ್ನು ನೋಡಿ ಇಂಥ ಅಮಾಯಕ ಹುಡುಗರ ಪ್ರಾಣಹರಣ ಮಾಡಲು ನಿಂತಿರುವವರಿಗೆ ಎಷ್ಟು ಸಮಾಧಾನವಾಗಿರಬೇಡ? ತಾವು ಏನು ಬೇಕಾದರೂ ಮಾಡಬಹುದು, ಈ ಜನ ನಮ್ಮನ್ನೇನೂ ಮಾಡುವುದಿಲ್ಲ ಎಂಬ ವಿಶ್ವಾಸ ಈಗಾಗಲೇ ಅವರಿಗೆ ಬಂದಿದೆ. ಸರ್ಕಾರದ ಕಾರ್ಯ ಕ್ಷಮತೆಗೆ ಹಿಡಿದ ಕನ್ನಡಿ ಇದು. ದುಷ್ಟರಿಗೆ ರಕ್ಷಣೆ ಒದಗಿಸುತ್ತ, ನಿರಪರಾಧಿಗಳನ್ನು ಸರ್ಕಾರವೇ ಮತ್ತೆ ಕೊಲ್ಲುತ್ತಿದೆ ಎಂಬ ಜನಾಭಿಪ್ರಾಯ ರೂಪುಗೊಳ್ಳುತ್ತಿದೆ.
ಗೃಹಮಂತ್ರಿಗಳೆ, ನಿಮ್ಮ ಈ ಸಜ್ಜನ-ವಿರೋಧಿ ಧೋರಣೆ ಮತ್ತು ಹಂತಕರ ಬಗೆಗಿನ ನಿರ್ಲಕ್ಷ್ಯ ಗಾಯಕ್ಕೆ ಉಪ್ಪು ಸವರಿದಂತಿದೆ. ಹಿಂದಿನ ಸರ್ಕಾರದಲ್ಲಿ ರುದ್ರೇಶ, ಪರೇಶ ಮುಂತಾದ ಹಲವರ ಕೊಲೆಯಾಗಿತ್ತು. ನಿಮ್ಮ ಸರ್ಕಾರ ಬಂದಮೇಲೆ ಕೊಲೆಗಾರರಿಗೆ ಶಿಕ್ಷೆ ಆಗಿದೆಯೆ ಹೇಳಿ.
ಆತ್ಮಾಭಿಮಾನವುಳ್ಳ ಹಿಂದು ಯುವಕರಿಗೆ ಬೆಲೆಯೇ ಇಲ್ಲವೆ? ಅವರಿಗೆ ಸಾವೇ ಅಂತಿಮವೇ? ಮಂತ್ರಿಗಳೇ ತಾವು ಅಪರಾಧಿಗಳನ್ನು ಶಿಕ್ಷಿಸುವುದಿಲ್ಲ ಎಂದು ಮನಸ್ಸು ಮಾಡಿಕೊಂಡಿದ್ದರೆ, ಅಂಥ ಒಂದು ಸರ್ಕಾರಿ ಆಜ್ಞೆಯನ್ನು ಹೊರಡಿಸಿಬಿಡಿ. ಜನರೆಲ್ಲ ಬಾಯಿ ಮುಚ್ಚಿಕೊಂಡು, ಮಚ್ಚಿನೇಟು ತಿಂದುಕೊಂಡು ಬಿದ್ದಿರುತ್ತಾರೆ.
| ಡಾ. ಎಸ್. ಆರ್. ಲೀಲಾ, ಶತಾವಧಾನಿ ಆರ್. ಗಣೇಶ, ಸಂದೀಪ್ ಬಾಲಕೃಷ್ಣ, ಜಿ. ಬಿ. ಹರೀಶ್, ಹರ್ಷ ಕೆ. ಆರ್., ವಾಸುಕಿ, ರಾಮಚಂದ್ರ, ಫಣಿರಾಜ್, ಜೀವನ್, ಪೂರ್ಣಿಮಾ