ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಗೌರಿ ಹುಣ್ಣಿಮೆಯ ಸಡಗರ ಕಳೆಗಟ್ಟಿದೆ. ಸಕ್ಕರೆಗೊಂಬೆ ತಯಾರಿಕೆ ಹಾಗೂ ಮಾರಾಟವೂ ಭರ್ಜರಿಯಾಗಿ ನಡೆಯುತ್ತಿದೆ.
ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಶಿವನ ಮಡಿಲಲ್ಲಿ ಕುಳಿತ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ತೊಟ್ಟಿಲು ತೂಗಿ, ಉಡಿ ತುಂಬಿ ಶ್ರದ್ಧಾಭಕ್ತಿಯಿಂದ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ಮಹಿಳೆಯರು ಬಗೆಬಗೆಯ ಸಕ್ಕರೆಗೊಂಬೆಗಳನ್ನು ತಂದು ಎಣ್ಣೆ ದೀಪದ ಆರತಿ ಬೆಳೆಗುತ್ತಾರೆ. ಜನಪದ ಹಾಡುಗಳನ್ನು ಹಾಡಿ ಸಂಭ್ರಮಿಸುತ್ತಾರೆ. ಹುಣ್ಣಿಮೆಯಂದು ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ವಿವಿಧ ಓಣಿಯ ಮಹಿಳೆಯರು ಒಂದೆಡೆ ಸೇರಿ ಜಾನಪದ ಹಾಡು, ಜಾನಪದ ಕ್ರೀಡೆಗಳ ಸ್ಪರ್ಧೆ ನಡೆಸಲಾಗುತ್ತದೆ. ನಂತರ ಹಿರಿಯ ಮಹಿಳೆಯರು ಗವಿಮಠದ ಬಳಿಯ ಬಾವಿಯಲ್ಲಿ ಗೌರಿಯನ್ನು ವಿಸರ್ಜಿಸುವ ಕಾರ್ಯಕ್ರಮ ನಡೆಯುತ್ತದೆ.
ಪಟ್ಟಣದ ವಾಣಿಪೇಟೆಯ ಗೌರಿಮಠ ಓಣಿಯಲ್ಲಿ ವೀರಯ್ಯ ಗೌರಿಮಠ ಎಂಬುವರ ಮನೆಯಲ್ಲಿ ಪ್ರತಿ ವರ್ಷವೂ ಗೌರಿ ಹುಣ್ಣಿಮೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ನೂರಾರು ವರ್ಷಗಳಿಂದಲೂ ಈ ಸಂಪ್ರದಾಯ ಬೆಳೆದುಕೊಂಡು ಬಂದಿದೆ.