ಸೊರಬ: ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ನಲ್ಲಿರುವವರು ಸ್ಥಳೀಯರಾಗಿದ್ದು ಅವರನ್ನು ಸಾರ್ವಜನಿಕ ಸಂಪರ್ಕಕ್ಕೆ ಬಾರದಂತೆ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಜನ ಆತಂಕಪಡಬೇಕಿಲ್ಲ ಎಂದು ಉಪವಿಭಾಗಾಧಿಕಾರಿ ಡಾ. ಎಲ್.ನಾಗರಾಜ್ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಸ್ಥಾಪಿಸುವ ಬಗ್ಗೆ ಜನಜಾಗೃತಿ ಮೂಡಿಸುವ ಸಂಬಂಧ ಹಮ್ಮಿಕೊಂಡಿದ್ದ ಜನಪ್ರತಿನಿಧಿಗಳ ಶಾಂತಿಸಭೆಯಲ್ಲಿ ಮಾತನಾಡಿ, ಹೊರ ರಾಜ್ಯ, ಜಿಲ್ಲೆಗಳಲ್ಲಿ ಸಿಲುಕಿರುವ ಸೊರಬ ತಾಲೂಕಿನವರು ಸ್ವಗ್ರಾಮಕ್ಕೆ ಆಗಮಿಸಿದರೆ ಅವರ ಆರೋಗ್ಯ ತಪಾಸಣೆ ನಡೆಸಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ನಲ್ಲಿರಿಸುವಂತೆ ಟಾಸ್ಕ್ಫೋರ್ಸ್ಗೆ ಸೂಚಿಸಲಾಗಿದೆ. ತಾಲೂಕಿನ 4 ಕಡೆ ಕ್ವಾರಂಟೈನ್ ಕೇಂದ್ರ ತೆರೆಯಲಾಗಿದೆ ಎಂದರು.
ತಪಾಸಣೆ ವೇಳೆ ಪಾಸಿಟಿವ್ ಬಂದರೆ ಅಂಥವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳಿಸಲಾಗುವುದು. ನೆಗೆಟಿವ್ ಬಂದ ವ್ಯಕ್ತಿಗಳನ್ನು 14 ದಿನ ಕ್ವಾರಂಟೈನ್ನಲ್ಲಿ ಇಡಲಾಗುವುದು ಎಂದು ತಿಳಿಸಿದರು.
ಹೊರ ದೇಶದಿಂದ 26, ರಾಜ್ಯದಿಂದ 184, ಜಿಲ್ಲೆಯಿಂದ 11,346 ಸೇರಿ ಒಟ್ಟು 11,793 ಜನ ತಾಲೂಕಿಗೆ ಬಂದಿದ್ದು, ಅದರಲ್ಲಿ ಹೊರ ದೇಶದಿಂದ ಬಂದಂತಹ ಎಲ್ಲರೂ ಕ್ವಾರಂಟೈನ್ ಮುಗಿಸಿದ್ದಾರೆ. ಹೊರ ರಾಜ್ಯದಿಂದ ಬಂದವರಲ್ಲಿ 147, ಹೊರ ಜಿಲ್ಲೆಯಿಂದ ಬಂದ 9,327 ಜನರು ಕ್ವಾರಂಟೈನ್ ಮುಗಿಸಿದ್ದಾರೆ ಎಂದು ಮಾಹಿತಿ ನೀಡಿದರು.
ತಹಸೀಲ್ದಾರ್ ನಫೀಸಾ ಬೇಗಂ, ತಾಪಂ ಇಒ ನಂದಿನಿ, ಸರ್ಕಲ್ ಇನ್ಸ್ಪೆಕ್ಟರ್ ಆರ್.ಡಿ.ಮರುಳಸಿದ್ಧಪ್ಪ, ಟಿಎಚ್ಒ ಡಾ. ಅಕ್ಷತಾ ವಿ.ಖಾನಾಪುರ, ಸಮಾಜ ಕಲ್ಯಾಣಾಧಿಕಾರಿ ಪ್ರವೀಣ್, ಬಿಸಿಎಂ ವಿಸ್ತರಣಾಧಿಕಾರಿ ಮಂಜಪ್ಪ, ಪಪಂ ಮುಖ್ಯಾಧಿಕಾರಿ ಜಗದೀಶ್ ನಾಯ್ಕ, ತಾಪಂ ಅಧ್ಯಕ್ಷೆ ನಯನಾ ಹೆಗಡೆ, ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಪಪಂ ಸದಸ್ಯರಾದ ಎಂ.ಡಿ.ಉಮೇಶ್, ಅಫ್ರೀನ್ ಬಾನು, ವೀರೇಶ್ ಮೇಸ್ತ್ರಿ, ಜಯಲಕ್ಷ್ಮೀ, ಪ್ರಭುಮೇಸ್ತ್ರಿ ಇದ್ದರು.