ಕೊಡೇಕಲ್ : ಕೊನೇ ವಾರದಲ್ಲಿ ಸುರಿದ ರೋಹಿಣಿ ಮಳೆಯಿಂದಾಗಿ ಹತ್ತಿ ಬಿತ್ತನೆ ಮಾಡಿದ ರೈತ ಮುಂಗಾರು ಮಳೆಯಾಗದ ಕಾರಣ ಸರಿಯಾಗಿ ಹತ್ತಿ ನಾಟಿಯಾಗದಿರುವುದಕ್ಕೆ ಗ್ರಾಮದ ಹಣುಮಪ್ಪ ಬೆಳೆ ನಾಶ ಮಾಡಿದ್ದಾನೆ.
ರೋಹಿಣಿ ನಂತರ ಆರಂಭವಾಗುವ ಮೃಗಶಿರ ಮತ್ತು ಆರಿದ್ರಾ ಮಳೆಯ ಮೇಲೆ ಭರವಸೆ ಇಟ್ಟು ವಲಯದ ರೈತರು ಬಿತ್ತನೆ ಮಾಡಿದ್ದರು. ಆದರೆ ಆ ಮಳೆಗಳು ಸಮಯಕ್ಕೆ ಸರಿಯಾಗಿ ಬಾರದ ಕಾರಣ ಬಿತ್ತನೆ ಮಾಡಿದ ಹತ್ತಿಗೆ ತೇವಾಂಶ ಕೊರತೆಯಾಗಿದ್ದರಿಂದ ಸರಿಯಾಗಿ ನಾಟಿ ಬಾರದಂತಾಗಿದೆ.
ದುಬಾರಿ ಬೆಲೆಯ ಹತ್ತಿ ಬೀಜ ತಂದು ಬಿತ್ತನೆ ಮಾಡಲಾಗಿತ್ತು. ಮಳೆ ಕೊರತೆಯಿಂದ ಅಲ್ಲೊಂದು ಇಲ್ಲೊಂದು ನಾಟಿಯಾಗಿದ್ದನ್ನು ಗಮನಿಸಿದ ರೈತ ಹಣುಮಪ್ಪ ತನ್ನ ಐದು ಎಕರೆಯಲ್ಲಿ ಬಿತ್ತನೆ ಮಾಡಿದ ಹತ್ತಿಯನ್ನು ಸಂಪೂರ್ಣ ನಾಶ ಮಾಡಿದ್ದಾನೆ. ಇದರಿಂದ ೩೦ ಸಾವಿರಕ್ಕೂ ಹೆಚ್ಚು ರೂ. ಹಾನಿಗೊಳಗಾಗಿದ್ದಾನೆ. ಇನ್ನೂ ವಲಯದ ಹಲವು ರೈತರ ಪಾಡು ಹೀಗೆಯೇ ಆಗಿದೆ.
ಒಟ್ಟಿನಲ್ಲಿ ಇನ್ನು ಎರಡ್ಮೂರು ದಿನದಲ್ಲಿ ಮಳೆಯಾದರೆ ಮಾತ್ರ ಬಿತ್ತನೆ ಮಾಡಿದ ಹತ್ತಿ ಮತ್ತು ತೊಗರಿ ರೈತರ ಹಿಡಿಯಬಹುದು. ಆದರೆ ಹೀಗೆಯೇ ಮುಂದುವರಿದರೆ ಭೀಕರ ಬರಗಾಲ ಅನುಭವಿಸಬೇಕಾಗುತ್ತದೆ. ದಿನಾ ಸಂಜೆ ಮೋಡ ಮಾತ್ರ ಭಯಾನಕವಾಗಿ ಕಾಣಿಸಿಕೊಳ್ಳುತ್ತವೆ ಆದರೆ ಮಳೆ ಮಾತ್ರ ಆಗುತ್ತಿಲ್ಲ. ಸಂಜೆಯಾಗುತ್ತಲೇ ಬೀಸುವ ಗಾಳಿಯಿಂದ ಮೋಡಗಳು ಚದುರಿ ಹೋಗುತ್ತಿರುವುದನ್ನು ರೈತರು ನೋಡುವಂತಾಗಿದೆ.