ತಿ.ನರಸೀಪುರ: ಪಟ್ಟಣದ ಕೆಎಸ್ಐಸಿ ರೇಷ್ಮೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಬಿದ್ದು ಗಾಯಗೊಂಡಿದ್ದ ನೌಕರನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಪರಿಹಾರಕ್ಕೆ ಒತ್ತಾಯಿಸಿ ಕುಟುಂಬದವರು ಬುಧವಾರ ಕಾರ್ಖಾನೆ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿದರು.
ತಾಲೂಕಿನ ಆಲಗೂಡು ಗ್ರಾಮದ ಶಿವಕುಮಾರ್ (45) ಮೃತ ನೌಕರ. ಕಾರ್ಖಾನೆಯ ಆಡಳಿತ ಮಂಡಳಿ ನಿರ್ಲಕ್ಷೃದಿಂದ ಈ ದುರಂತ ಸಂಭವಿಸಿದೆ ಎಂದು ಕುಟುಂಬದವರು ಆರೋಪಿಸಿದರು.
ಕಳೆದ ಮೂರು ತಿಂಗಳ ಹಿಂದೆ ಕಾರ್ಖಾನೆಯ ಕೆಲಸದ ಸಮಯಯಲ್ಲಿ ಕಸ ಹೊಡೆಯುತ್ತಿದ್ದಾಗ ಮೇಲಿಂದ ಬಿದ್ದ ಪರಿಣಾಮ ಶಿವಕುಮಾರ್ ಸೊಂಟ ಮುರಿದಿತ್ತು. ಅಲ್ಲದೆ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು ಎನ್ನಲಾಗಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ. ಆದರೆ ಕಾರ್ಖಾನೆಯ ಆಡಳಿತ ಮಂಡಳಿಯು ನೌಕರನ ಕುಟುಂಬಕ್ಕೆ ಯಾವುದೇ ಸೌಲಭ್ಯ ಒದಗಿಸಿಲ್ಲ ಎಂದು ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.
ಮೃತರ ಪುತ್ರ ಮನೋಜ್ ಮಾತನಾಡಿ, ನನ್ನ ತಂದೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೂ ಸೌಜನ್ಯಕ್ಕಾದರೂ ಕಾರ್ಖಾನೆಯ ಯಾವುದೇ ಸಿಬ್ಬಂದಿ ಬಂದು ಅವರ ಅರೋಗ್ಯ ವಿಚಾರಿಸಿಲ್ಲ. ಅವರಿಗೆ ಸಲ್ಲಬೇಕಾದ ಅರೋಗ್ಯ ವಿಮೆ ಮತ್ತು ಇನ್ನಿತರ ಸೌಲಭ್ಯಗಳನ್ನೂ ತಲುಪಿಸಿಲ್ಲ ಎಂದು ಆರೋಪಿಸಿದರು.
ಪತ್ನಿ ನಂದಿನಿ ಮಾತನಾಡಿ, ನನ್ನ ಪತಿಗೆ ಬಂದ ಕಷ್ಟ ಬೇರೆ ಕಾರ್ಮಿಕರಿಗೆ ಬರಕೂಡದು. ನಮಗೆ ಬರಬೇಕಾದ ಪರಿಹಾರ, ಆರೋಗ್ಯ ವಿಮೆ ಮತ್ತು ಇನ್ನಿತರ ಸೌಲಭ್ಯ ನೀಡದ ಹೊರತು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿ ಪ್ರತಿಭಟನೆ ಮುಂದುವರಿಸಿದರು.