ಹುಬ್ಬಳ್ಳಿ: ಕರ್ನಾಟಕ ಮಟೇರಿಯಲ್ ಟೆಸ್ಟಿಂಗ್ ಆಂಡ್ ರೀಸರ್ಚ್ ಸೆಂಟರ್ (ಕೆಎಂಟಿಆರ್ಸಿ) ಸಂಸ್ಥೆಗೆ ನಗರದ ಗೋಕುಲ ರಸ್ತೆ ಕೈಗಾರಿಕಾ ವಸಾಹತುವಿನಲ್ಲಿರುವ ಎ4, ಎ5 ಶೆಡ್ಗಳನ್ನು 99 ವರ್ಷ ಲೀಸ್ ನೀಡುವ ಪತ್ರವನ್ನು ಕೈಗಾರಿಕೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ ಶೆಟ್ಟರ್ ಸೋಮವಾರ ತಮ್ಮ ನಿವಾಸದಲ್ಲಿ ಹಸ್ತಾಂತರ ಮಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಡಿಯಲ್ಲಿ ಸ್ಥಾಪಿಸಿದ ಕರ್ನಾಟಕ ಮಟೇರಿಯಲ್ ಟೆಸ್ಟಿಂಗ್ ಆಂಡ್ ರೀಸರ್ಚ್ ಸೆಂಟರ್ ಎನ್ಎಬಿಎಲ್ (ನ್ಯಾಷನಲ್ ಅಕ್ರಿಡಿಯೇಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಆಂಡ್ ಕ್ಯಾಲಿಬರೇಷನ್ ಲ್ಯಾಬೋರೇಟರಿಸ್) ಪ್ರಮಾಣ ಪತ್ರ ಹೊಂದಿದೆ.
ಕಳೆದ 25 ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ಕೈಗಾರಿಕೆಗಳಿಗೆ ವಸ್ತುಗಳ ಗುಣಮಟ್ಟ ಪರೀಕ್ಷಿಸಿ ಕೊಡುತ್ತಿದೆ. ಲೀಸ್ ಪತ್ರ ನೀಡುವ ಮುಖಾಂತರ ಪರೀಕ್ಷಾ ಕೇಂದ್ರ ಅಭಿವೃದ್ಧಿ ಪಡಿಸಲು ಸರ್ಕಾರ ಒತ್ತು ನೀಡಿದೆ. ಉದ್ದಿಮೆದಾರರ ಬೇಡಿಕೆಗೆ ಅನುಸಾರವಾಗಿ ಇನ್ನೂ ಹೆಚ್ಚಿನ ಪ್ರಮಾಣದ ಟೆಸ್ಟಿಂಗ್ ಅನುಕೂಲತೆ ಒದಗಿಸಲು ಸಂಸ್ಥೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಶೆಟ್ಟರ್ ತಿಳಿಸಿದರು.
ಕೆಎಸ್ಎಸ್ಐಡಿಸಿ ಅಧಿಕಾರಿ ಡಿ.ಎಚ್. ನಾಗೇಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ, ಪರೀಕ್ಷಾ ಕೇಂದ್ರದ ಅಧ್ಯಕ್ಷ ನಾಗರಾಜ ದಿವಟೆ, ಪ್ರಧಾನ ಕಾರ್ಯದರ್ಶಿ ಮಹೇಶ ಜಾಡರ, ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಕುಲಕರ್ಣಿ, ಉಪಾಧ್ಯಕ್ಷ ಜಯಪ್ರಕಾಶ ತೆಂಗಿನಕಾಯಿ, ಸಹ ಕಾರ್ಯದರ್ಶಿ ಎಂ.ಕೆ. ಪಾಟೀಲ, ಖಜಾಂಚಿ ಹೇಮಂತ್ ಉಪಸ್ಥಿತರಿದ್ದರು.