ಚಳ್ಳಕೆರೆ: ನಗರದ ಹೆಗ್ಗೆರೆ ತಾಯಮ್ಮ ಬಾಲಕಿಯರ ಪ್ರೌಢಶಾಲೆ, ಸಮೀಪದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಗಳ ಆವರಣ ಕುಡುಕರ ಹಾವಳಿಗೆ ನಲುಗಿ ಹೋಗಿವೆ.
ಬಿಸಿನೀರು ಮುದ್ದಪ್ಪ ಶಾಲೆಯ ಹಳೆ ಕಟ್ಟಡ ಮುಂಭಾಗದಲ್ಲಿ ನೂತನ ಶಾಲಾ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಹಿಂಭಾಗದ ಹಳೆ ಶಾಲಾ ಕಟ್ಟಡದ ಮೇಲ್ಭಾಗದಲ್ಲಿ ಸಂಜೆಯಾಗುತ್ತಿದ್ದಂತೆ ಬೀರು, ರಮ್ಮು ಬಾಟಲಿಗಳ ಜತೆ ಚಿಕನ್ ಕಬಾಬ್ ಕಟ್ಟಿಸಿಕೊಂಡು ಗುಂಪು ಗುಂಪಾಗಿ ಪಾರ್ಟಿ ಮಾಡುವವರ ದಂಡೇ ಇಲ್ಲಿ ನೆರೆದಿರುತ್ತದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಡಿದ ನಿಶೆಯಲ್ಲಿ ಶಾಲಾ ಆವರಣಕ್ಕೆ ಬಿಸಾಡಿದ ಬಾಟಲಿ, ಗಾಜು ಚೂರುಗಳನ್ನು ವಿದ್ಯಾರ್ಥಿಗಳು ತೆಗೆದು ಸ್ವಚ್ಛಗೊಳಿಸಬೇಕಿದೆ. ಇದರಿಂದ ರೋಸಿ ಹೋಗಿರುವ ಮುಖ್ಯ ಶಿಕ್ಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಇನ್ನು ವಿದ್ಯಾರ್ಥಿನಿಯರು ಕಲಿಯುತ್ತಿರುವ ಹೆಗ್ಗೆರೆ ತಾಯಮ್ಮ ಸರ್ಕಾರಿ ಶಾಲೆಯ ಚಟುವಟಿಕೆಗಳ ಸುರಕ್ಷತೆಗೆ ಮೂರು ಕಡೆ ಸಿಸಿ ಕ್ಯಾಮರಾ ಅಳವಡಿಕೆ ಮಾಡಿದ್ದ ಎರಡೇ ದಿನದಲ್ಲಿ ಧ್ವಂಸ ಮಾಡಿರುವ ಕಿಡಿಗೇಡಿಗಳು ಒಂದು ಸಿಸಿ ಕ್ಯಾಮರಾವನ್ನೇ ಕಿತ್ತುಕೊಂಡು ಹೋಗಿದ್ದಾರೆ. ಸಂಜೆ ಪಾಳೆಯದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಶಾಲೆಗಳ ಆವರಣದ ಸುರಕ್ಷತೆಗೆ ನಿಯೋಜನೆ ಮಾಡಬೇಕು ಎಂದು ಶಾಲಾ ಶಿಕ್ಷಕರು ಒತ್ತಾಯಿಸಿದ್ದಾರೆ.
ಗುಂಡು, ತುಂಡು, ಮೋಜು, ಮಸ್ತಿಗೆ ಶಾಲಾ ಆವರಣ ಬಳಸಿಕೊಂಡು ವಾತಾವರಣ ಹದಗೆಡಿಸುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಎಸ್. ರವಿ, ಅಧ್ಯಕ್ಷ, ರಾಜ್ಯ ಶಿಕ್ಷಣ ಪರಿಷತ್, ಚಳ್ಳಕೆರೆ.