ಸೊರಬ: ಕನ್ನಡ ನಾಡು-ನುಡಿ-ನೆಲ-ಜಲದ ಬಗ್ಗೆ ಕೀಳರಿಮೆ ಬಿಟ್ಟು ಅಖಂಡ ಕರ್ನಾಟಕದ ಉಳಿವಿಗಾಗಿ ಪ್ರತಿಯೊಬ್ಬರೂ ಕಂಕಣಬದ್ಧರಾಗುವಂತೆ ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ಒಂದು ಭಾಷೆ ಮಾತನಾಡುವುದಕಷ್ಟೇ ಸೀಮಿತವಾದರೆ ಪ್ರಬಲ ಭಾಷೆಗಳ ಜತೆ ನಿರಂತರವಾಗಿ ಅನುಸಂಧಾನ ನಡೆಸಲು ಸಾಧ್ಯವಿಲ್ಲ. ಇಂದು ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ಭಾಷೆಗಳು ನಶಿಸುವ ಹಂತದಲ್ಲಿವೆ. ಇಂತಹ ಸಂದರ್ಭದಲ್ಲಿ ಓದುವ ಹಾಗೂ ಬರೆಯುವ ಸಂಸ್ಕೃತಿಯನ್ನು ಬೆಳೆಸಿಕೊಂಡಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ. ನಾನು ಸೇರಿದಂತೆ ಬಹುಪಾಲು ಜನರು ಇಂದು ಪತ್ರಿಕೆಗಳ ಮುಖ್ಯಾಂಶಗಳನ್ನು ಮಾತ್ರ ಓದುವಲ್ಲಿ ಸೀಮಿತವಾಗಿದ್ದೇವೆ. ಎಲ್ಲರೂ ಹೆಚ್ಚು ಕನ್ನಡ ಪತ್ರಿಕೆಗಳನ್ನು ಓದುವ ನಿಟ್ಟಿನಲ್ಲಿ ಕನ್ನಡವನ್ನು ಬೆಳಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಯುವ ಜನತೆ ಓದುವ ಹಾಗೂ ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಕಾಶವಾಣಿ ಕಲಾವಿದ ಎಚ್.ಗುರುಮೂರ್ತಿ, ಪೂರ್ಣಿಮಾ ಭಾವೆ, ರೂಪಾಶ್ರೀ, ಈಶ್ವರ ಹಾಗೂ ಪಟ್ಟಣದ ಸರ್ಕಾರಿ ಪದವಿ ಪೂರ್ವ, ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳು ಗೀತ ಗಾಯನ ನಡೆಸಿಕೊಟ್ಟರು.