More

    ಕಾಲುಬಾಯಿ ರೋಗ ಲಸಿಕಾ ಅಭಿಯಾನ

    ಚಿತ್ರದುರ್ಗ: ಜಿಲ್ಲಾದ್ಯಂತ ಏಪ್ರಿಲ್ 1ರಿಂದ 30ರ ವರೆಗೆ 5ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
    ಡಿಸಿ ಕಚೇರಿಯಲ್ಲಿ ಶುಕ್ರವಾರ ಲಸಿಕಾ ಅಭಿಯಾನ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವ್ಯಾಪಕ ಪ್ರಚಾರದೊಂದಿಗೆ ಎಲ್ಲೆಡೆ ತೆರಳಿ ಜಾನುವಾರುಗಳಿಗೆ ಲಸಿಕೆ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು.
    ಬೇಸಿಗೆ ಹಿನ್ನೆಲೆಯಲ್ಲಿ, ಲಸಿಕೆ ನೀಡುವ ಸಂದರ್ಭ ಜಾನುವಾರುಗಳಲ್ಲಿ ಬೇರೆ ರೋಗ ಲಕ್ಷಣಗಳಿದ್ದರೆ ಸೂಕ್ತ ಚಿಕಿತ್ಸೆ ನೀಡಬೇಕು. ಸಾಂಕ್ರಾಮಿಕ ರೋಗಗಳು ಕಂಡು ಬಂದರೆ ತಕ್ಷಣ ವರದಿ ಮಾಡಬೇಕು. ಲಸಿಕೆ ಹಾಕುವಲ್ಲಿ ಶೇ.100 ಗುರಿ ಸಾಧಿಸಬೇಕು. ಲಸಿಕೆ ನೀಡಿದ ಪ್ರತಿ ಜಾನುವಾರು ಮಾಹಿತಿಯನ್ನು ತಂತ್ರಾಂಶದಲ್ಲಿ ತಪ್ಪದೆ ನಮೂದಿಸಿ ವರದಿ ಮಾಡಬೇಕು ಎಂದರು.
    ತೀವ್ರ ಬರಗಾಲ ಹಿನ್ನೆಲೆಯಲ್ಲಿ 2018-19 ಸಾಲಿನ ಜಾನುವಾರು ಗಣತಿ ಆಧರಿಸಿ ಜಿಲ್ಲೆಯಲ್ಲಿ ಗೋಶಾಲೆಗಳು ಹಾಗೂ ಮೇವು ಬ್ಯಾಂಕ್‌ಗಳನ್ನು ತರೆಯಲಾಗಿದ್ದು, ಇವುಗಳ ಸದ್ಬಳಕೆಯಾಗಬೇಕು. ನಾಮಕಾವಸ್ಥೆಗೆ ಗೋಶಾಲೆಗಳು ಎಂಬಂತಾಗಬಾರದು. ಯಾವ ಸ್ಥಳಗಳಲ್ಲಿ ಗೋಶಾಲೆಗಳ ಅಗತ್ಯ ಇಲ್ಲವೋ ಅಲ್ಲಿ ಮೇವು ಬ್ಯಾಂಕ್ ತೆರೆಯಬೇಕು. ಗೋಶಾಲೆಗಳಲ್ಲಿ ತಾತ್ಕಾಲಿಕ ಚಪ್ಪರ ಹಾಕಿ ನೆರಳಿನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
    ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕಿ ಡಾ.ಜಿ.ಇಂದಿರಾಬಾಯಿ ಮಾತನಾಡಿ, 20ನೇ ಗಣತಿ ಆಧರಿಸಿ ಜಿಲ್ಲೆಯಲ್ಲಿ 3,38,907 ಜಾನುವಾರುಗಳಿವೆ. 2,97,800 ಲಸಿಕಾ ಡೋಸ್ ಸರಬರಾಜು ಆಗಿವೆ. 6 ತಾಲೂಕುಗಳಲ್ಲಿ 991 ಗ್ರಾಮಗಳಲ್ಲಿರುವ ಜಾನುವಾರುಗಳಿಗೆ ಲಸಿಕೆ ಹಾಕಬೇಕಿದೆ. 3390 ಬ್ಲಾಕ್‌ಗಳನ್ನಾಗಿ ವಿಭಾಗಿಸಲಾಗಿದೆ. 237 ಲಸಿಕಾದಾರರು ಪ್ರತಿ ದಿನ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಮನೆ, ಮನೆಗೆ ತೆರಳಿ ಲಸಿಕೆ ನೀಡಲಿದ್ದಾರೆ ಎಂದರು.
    ಈ ಹಿಂದೆ ಜರುಗಿದ 4ನೇ ಸುತ್ತಿನ ಲಸಿಕಾ ಕಾರ್ಯಕ್ರಮದಲ್ಲಿ 1,96,992 ದನಗಳು ಹಾಗೂ 86797 ಎಮ್ಮೆಗಳು ಸೇರಿ 2,83,789 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ ಎಂದು ಹೇಳಿದರು.
    ಸಭೆಯಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್.ಬಣಕಾರ್, ನಗರಸಭೆ ಪರಿಸರ ಇಂಜಿನಿಯರ್ ಜಾಫರ್ ಮತ್ತಿತರ ಅಧಿಕಾರಿಗಳಿದ್ದರು.

    *ವಾರದ ಗಡುವು
    ಜಿಲ್ಲೆಯಲ್ಲಿರುವ ಜಾನುವಾರುಗಳು, ಸುಸ್ಥಿಯಲ್ಲಿರುವ ಬೋರ್‌ವೆಲ್‌ಗಳ ಸಂಖ್ಯೆ, ಎಷ್ಟು ಟನ್ ಹಸಿರು ಮೇವು ಉತ್ಪಾದನೆಯಾಗುತ್ತಿದೆ? ಎಷ್ಟು ರೈತರು ಹಸಿರು ಮೇವು ಬೆಳೆಯುತ್ತಿದ್ದಾರೆ? ಯಾವ ಪ್ರದೇಶಗಳಲ್ಲಿ ಗೋಶಾಲೆ ಹಾಗೂ ಮೇವು ಬ್ಯಾಂಕ್ ಅವಶ್ಯಕತೆ ಇದೆ? ಈಗ ಕಾರ್ಯನಿರ್ವಹಿಸುತ್ತಿರುವ ಗೋಶಾಲೆಗಳಲ್ಲಿ ಆಶ್ರಯ ಪಡೆಯುತ್ತಿರುವ ಜಾನುವಾರುಗಳು, ಸ್ವತಃ ಮಾಲೀಕರೇ ಮೇವು ಒದಗಿಸುತ್ತಿರುವ ಜಾನುವಾರುಗಳು, ವಲಸೆ ಹೋದ ಕುರಿ ಹಾಗೂ ಮೇಕೆ ಸಂಖ್ಯೆ ಎಷ್ಟು? ಎಂಬಿತ್ಯಾದಿ ತಾಲೂಕುವಾರು ನಿಖರ ಮಾಹಿತಿ ವರದಿಯನ್ನು ವಾರದೊಳಗೆ ವರದಿ ಸಲ್ಲಿಸುವಂತೆ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts