ಸಸಿ ಹೆಮ್ಮರವಾಗಿ ಬೆಳೆದರೆ ಅದು ಹಲವಾರು ಪಶು ಪಕ್ಷಿಗಳಿಗೆ ಮತ್ತು ಜನರಿಗೆ ನೆರಳು ನೀಡುವುದು. ಹೂ ಕಾಯಿ ಹಣ್ಣು ಕೊಡುವುದು. ಮನುಷ್ಯರಂತೆ ಮರಕ್ಕೆ ಕೈ ಕಾಲು ಕಣ್ಣು ಏನೂ ಇಲ್ಲದಿದರೂ ಅದು ಮಾಡುವ ಸತ್ಕಾರ್ಯ ಸಣ್ಣದಲ್ಲ. ಮನುಷ್ಯನ ಜೀವನವೂ ಹೆಮ್ಮರದಂತೆ ಬೆಳೆಯಬೇಕು. ಬಂಧು ಬಳಗದವರಿಗೆ, ನೆರೆ ಹೊರೆಯವರಿಗೆ, ಬಳಲಿ ಬಂದವರಿಗೆ ಆಶ್ರಯ ನೀಡಬೇಕು. ಸಂಸಾರದ ತಾಪದಿಂದ ಬೆಂದು ಬಂದವರಿಗೆ ನೆಮ್ಮದಿಯ ನೆರಳನ್ನು ನೀಡಬೇಕು. ದೇವರು ಕರುಣಿಸಿದ ಈ ಬದುಕಿಗೆ ಬೆಲೆ ಕಟ್ಟಲಾಗದು. ದೇಹ ಮತ್ತು ಸಂಪತ್ತು ಶಾಶ್ವತವಲ್ಲ. ಮೃತ್ಯು ಸದಾ ಬೆನ್ನ ಹಿಂದಿದೆ. ಆದ್ದರಿಂದ ಮನುಷ್ಯ ಧರ್ಮಮಾರ್ಗದಲ್ಲಿ ಮುನ್ನಡೆದು ಪುಣ್ಯ ಕಟ್ಟಿಕೊಳ್ಳುವುದು ಗುರಿಯಾಗಬೇಕು. ಬಾಲ್ಯ, ಯೌವನ, ಮುಪ್ಪು, ರೋಗ ರುಜಿನ ಮೊದಲಾದ ಅವಸ್ಥೆಗಳಿಂದ ರೂಪ ಕಳೆದು ಹೋಗುತ್ತದೆ. ಆಯುಷ್ಯ ಇರುವುದರೊಳಗಾಗಿ ಜೀವನದಲ್ಲಿ ಸಮೃದ್ಧಿ, ಸಂತೃಪ್ತಿಯನ್ನು ಸಂಪಾದಿಸಬೇಕು. ಬಾಹ್ಯ ಸಂಪತ್ತು ಸಮೃದ್ಧಿಯಾದರೆ ಅಂತರಂಗದ ಸಂಪತ್ತು ಸಂತೃಪ್ತಿಯಾಗಿದೆ.
ಅನುಭಾವಿಗಳ ಸಂಗದಲ್ಲಿದ್ದಾಗ ಮನುಷ್ಯನ ಅಂತರಂಗ ಪರಿಶುದ್ಧಗೊಳ್ಳುತ್ತದೆ. ಅಲ್ಲಿ ಜ್ಞಾನದ ಬೆಳಕು ಮತ್ತು ಶಾಂತಿಯ ಪರಿಮಳ ಸೂಸುತ್ತದೆ. ಶಾಂತಿ ಸಮಾಧಾನ ನೀಡುವ ವಿದ್ಯೆಯೇ ನಿಜವಾದ ಆಧ್ಯಾತ್ಮ ವಿದ್ಯೆ. ಯಾವ ನದಿಯೂ ನೇರವಾಗಿ ಹರಿದು ಸಾಗರವನ್ನು ಸೇರುವುದಿಲ್ಲ. ತಗ್ಗು ದಿನ್ನೆ ಹಳ್ಳ ಕೊಳ್ಳಗಳನ್ನು ದಾಟಿ ಕೊನೆಗೆ ಸಾಗರವನ್ನು ಸೇರುತ್ತದೆ. ಅದೇ ರೀತಿ ಜೀವನ ನದಿಯಲ್ಲಿಯೂ ಏರಿಳಿತಗಳು ಸಹಜ. ಇವು ದೇಹಕ್ಕೆ ನಿಶ್ಚಿತ, ಆತ್ಮಕ್ಕಲ್ಲ ಎಂಬುದನ್ನು ಅರಿತಾಗ ಭೌತಿಕ ದುಃಖ ದೂರಾಗುತ್ತದೆ.
ಬಾಹ್ಯ ಕತ್ತಲೆ ಕಳೆಯಲು ದೀಪ ಬೇಕು. ಅಂತರಂಗದಲ್ಲಿ ಅಡಗಿರುವ ಕತ್ತಲೆ ಕಳೆಯಲು ಗುರುನಾಥನ ಕರುಣೆ ಬೇಕಾಗುತ್ತದೆ. ಜ್ಞಾನ ಸೂರ್ಯನಾದ ಶ್ರೀ ಗುರುವಿನ ಬೋಧಾಮೃತದ ಬೆಳಕಿನಲ್ಲಿ ಮುನ್ನಡೆಯುವುದು ಎಲ್ಲರ ಗುರಿಯಾಗಬೇಕು. ಸತ್ಯ ಶುದ್ಧಾತ್ಮಕವಾದ ಜೀವನದಲ್ಲಿ ಪೂರ್ವಜರ ಆದರ್ಶ ಚಿಂತನಗಳನ್ನು ಅಳವಡಿಸಿಕೊಂಡು ಬಾಳುವುದು ಶ್ರೇಯಸ್ಕರ.
ಸಿಕ್ಸ್ ಹೊಡೆಯಲು ಗಾಳಿಯಲ್ಲಿ ಜಿಗಿದ ‘ಕಿವೀಸ್’ ಆಟಗಾರ! ಹೀಗೂ ಆಡ್ತಾರಾ? ಬೆರಗಾದ್ರು ಕ್ರಿಕೆಟ್ ಫ್ಯಾನ್ಸ್
ನನಗಂತೂ ಇದು ಸರಿ ಅನಿಸಲಿಲ್ಲ! ದೆಹಲಿ ಏರ್ಪೋರ್ಟ್ನ ಪಾಸ್ಪೋರ್ಟ್ ಅಧಿಕಾರಿ ವಿರುದ್ಧ ರಷ್ಯನ್ ಚೆಲುವೆ ಕಿಡಿ