More

    ಕಾರ್ಖಾನೆಗಳಲ್ಲಿ ಕಟ್ಟುನಿಟ್ಟಿನ ಸುರಕ್ಷಾ ಕ್ರಮ

    ಧಾರವಾಡ: ಜಿಲ್ಲೆಯ ವಿವಿಧ ಕೈಗಾರಿಕಾಭಿವೃದ್ಧಿ ಪ್ರದೇಶಗಳಲ್ಲಿರುವ ಅಪಾಯಕಾರಿ ಉದ್ಯಮಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಲೋಪಗಳಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು.

    ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಬಿಕ್ಕಟ್ಟು ನಿರ್ವಹಣಾ ಕೋಶದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಆಂಧ್ರಪ್ರದೇಶದ ವಿಶಾಖಪಟ್ಟಣ ಸಮೀಪದ ರಾಸಾಯನಿಕ ಘಟಕದಲ್ಲಿ ಅನಿಲ ಸೋರಿಕೆಯಿಂದಾಗಿ ಸಂಭವಿಸಿದ ಅವಘಡದಿಂದ ಎದುರಾಗಿರುವ ಅಪಾಯ ಗಮನದಲ್ಲಿಟ್ಟುಕೊಳ್ಳಬೇಕು. ಜಿಲ್ಲೆಯ ಗೋಕುಲ, ತಾರಿಹಾಳ, ರಾಯಾಪುರ, ಗಾಮನಗಟ್ಟಿ, ಬೇಲೂರು ಕೈಗಾರಿಕಾಭಿವೃದ್ಧಿ ಪ್ರದೇಶಗಳಲ್ಲಿರುವ ಎಲ್ಲ ಉದ್ಯಮ ಘಟಕಗಳಲ್ಲಿ ಸುರಕ್ಷತಾ ಕ್ರಮಗಳ ಪಾಲನೆ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ತ್ರೈಮಾಸಿಕವಾಗಿ ನಡೆಸಬೇಕಾದ ಆಪತ್ತು ನಿರ್ವಹಣೆಯ ಅಣಕು ಪ್ರದರ್ಶನಗಳನ್ನು ಸಮರ್ಪಕವಾಗಿ ಆಯೋಜಿಸಿ ನಿರಂತರವಾಗಿ ಸುರಕ್ಷತಾ ಕ್ರಮಗಳ ಅರಿವು ಮೂಡಿಸಬೇಕು. ಕ್ಷಿಪ್ರ ಪ್ರತಿಕ್ರಿಯೆ ತಂಡಗಳು ಸದಾಕಾಲ ಜಾಗ್ರತವಾಗಿರಬೇಕು ಎಂದು ಸೂಚಿಸಿದರು.

    ಕ್ರೆಸ್ಟ್ ಸ್ಪೆಷಾಲಿಟಿ ರೆಸಿನ್ಸ್ ಪ್ರೈವೇಟ್​ನ ಪ್ರತಿನಿಧಿಗಳು ಮಾತನಾಡಿ, ಘಟಕವು 18.72 ಟನ್ ಕ್ಸೈಲಿನ್ ಹಾಗೂ 1 ಟನ್ ಸ್ಟೈರೀನ್ ರಸಾಯನಿಕಗಳ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಸುರಕ್ಷತೆಗಾಗಿ ನುರಿತ ಅಗ್ನಿಶಾಮಕ ತಂಡ, ಫೈರ್ ಹೈಡ್ರಂಟ್ ವ್ಯವಸ್ಥೆ, ಬೆಂಕಿ ನಂದಿಸುವ ಸಾಮಗ್ರಿಗಳನ್ನು ಎಲ್ಲೆಡೆ ಅಳವಡಿಸಲಾಗಿದೆ. ಕಾರ್ವಿುಕರು ಕಡ್ಡಾಯವಾಗಿ ವೈಯಕ್ತಿಕ ಸುರಕ್ಷತಾ ಉಪಕರಣಗಳಾದ ಮಾಸ್ಕ್, ಸೇಫ್ಟಿ ಗಾಗಲ್, ಕೈಗವಸು, ಬೂಟುಗಳನ್ನು ಬಳಸುತ್ತಾರೆ ಎಂದು ಮಾಹಿತಿ ನೀಡಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಡಿಸಿಪಿ ಕೃಷ್ಣಕಾಂತ್, ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಧಿಕಾರಿ ಮಹಮದ್ ಜುಬೇರ್, ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಅಧಿಕಾರಿ ಶೋಭಾ ಪೋಳ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡಿ. ಡೊಳ್ಳಿನ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳಾದ ಈಶ್ವರ ನಾಯಕ್, ಶ್ರೀಕಾಂತ, ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ಸಂಯೋಜಕ ಪ್ರಕಾಶ, ಇತರರಿದ್ದರು.

    ಜಿಲ್ಲೆಯಲ್ಲೂ ಇವೆ ಅಪಾಯಕಾರಿ ಘಟಕ!: ಕಾರ್ಖಾನೆಗಳು ಮತ್ತು ಬಾಯ್ಲರ್​ಗಳ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಹಾಗೂ ಜಿಲ್ಲಾ ಬಿಕ್ಕಟ್ಟು ನಿರ್ವಹಣಾ ಕೋಶದ ಸದಸ್ಯ ಕಾರ್ಯದರ್ಶಿ ಭಾರತಿ ಮಗದುಮ್ ಮಾತನಾಡಿ, ಧಾರವಾಡ ತಾಲೂಕು ವ್ಯಾಪ್ತಿಯಲ್ಲಿ 8 ಪ್ರಮುಖ ಅಪಾಯಕಾರಿ ಘಟಕಗಳಿವೆ. ಹುಬ್ಬಳ್ಳಿಯಲ್ಲಿ 5 ಹಾಗೂ ಕಲಘಟಗಿಯಲ್ಲಿ 1 ಅಪಾಯಕಾರಿ ಘಟಕಗಳಿವೆ. ಸಾರ್ವಜನಿಕ ವಲಯದ ಎಚ್​ಪಿಸಿಎಲ್, ಬಿಪಿಸಿಎಲ್ ಸೇರಿ ಖಾಸಗಿ ವಲಯದ ಮಹಾ ಎಲ್​ಪಿಜಿ ಮತ್ತಿತರ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಕ್ರೆಸ್ಟ್ ಸ್ಪೆಷಾಲಿಟಿ ರೆಸಿನ್ಸ್ ಪ್ರೈವೇಟ್ ಘಟಕವು ವಿಶಾಖಪಟ್ಟಣದ ಎಲ್​ಜಿ ಪಾಲಿಮರ್ಸ್ ಮಾದರಿಯ ಉತ್ಪಾದನೆಗಳ ಸಣ್ಣ ಘಟಕವಾಗಿದೆ. ಅಲ್ಲಿ 27 ಜನ ಕಾಯಂ ಉದ್ಯೋಗಿಗಳು ಸೇರಿ 69 ಕಾರ್ವಿುಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸುರಕ್ಷತಾ ಕ್ರಮಗಳ ಪಾಲನೆಯ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts