ಮುಳಬಾಗಿಲು: ಕಾಡುಪ್ರಾಣಿಗಳನ್ನು ಬೇಟೆಯಾಡಿದರೆ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಎಚ್ಚರಿಕೆ ನೀಡಿದರು.
ದೇವರಾಯಸಮುದ್ರ ಗ್ರಾಪಂ ವ್ಯಾಪ್ತಿಯ ಹೊಳಲಿ ಕೆರೆಯಲ್ಲಿ ಕಾಡುಪ್ರಾಣಿಗಳಿಗೆ ನೀರು ಒದಗಿಸಲು ಅರಣ್ಯ ಇಲಾಖೆಯಿಂದ ನಿರ್ಮಿಸಿರುವ ಹೊಂಡಗಳಿಗೆ ನೀರು ತುಂಬುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿ, ಜಿಂಕೆಗಳು ದೇವರಾಯಸಮುದ್ರ ಬೆಟ್ಟದ ಸುತ್ತಮುತ್ತಲ ಪ್ರದೇಶಗಳ ಕೃಷಿ ಪ್ರದೇಶಕ್ಕೆ ಬಂದರೂ ತೊಂದರೆ ನೀಡಬಾರದು. ಅವು ಸೌಮ್ಯ ಜೀವಿಗಳಾಗಿದ್ದು, ಯಾರೂ ಬೇಟೆಯಾಡಬಾರದು. ಕಾಡುಪ್ರಾಣಿಗಳನ್ನು ರಕ್ಷಿಸುವ ಹೊಣೆ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.
ಶೀಘ್ರದಲ್ಲಿಯೇ ತಾಲೂಕಿನ 34 ಕೆರೆಗಳಿಗೆ ಕೆ.ಸಿ ವ್ಯಾಲಿ ನೀರು ತುಂಬಿಸಲಾಗುವುದು. ಹೊಳಲಿ ಕೆರೆಯಿಂದ ಪಂಪ್ಮಾಡಿ ಕೀಲುಹೊಳಲಿ, ದೇವರಾಯಸಮುದ್ರ, ಮುಳಬಾಗಿಲು ಕೆರೆಗಳನ್ನು ಭರ್ತಿ ಮಾಡಲಾಗುತ್ತದೆ. ಇಲ್ಲಿಂದ ಪೈಪ್ಲೈನ್ ಮೂಲಕ ತಾಲೂಕಿನ ಆಯ್ದ ಕೆರೆಗಳಿಗೆ ನೀರು ಬಿಡುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಮಳೆಗಾಲದ ವೇಳೆಗೆ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.
ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್, ಇಒ ಎಂ.ಬಾಬು, ಸಿಪಿಐ ಎಸ್.ಟಿ.ಮಾರ್ಕಂಡಯ್ಯ, ವಲಯ ಅರಣ್ಯಾಧಿಕಾರಿ ಕೆ.ಎನ್.ರವಿಕೀರ್ತಿ, ಉಪವಲಯ ಅಧಿಕಾರಿಗಳಾದ ಆರ್.ಎಂ.ಭರತ್ಕುಮಾರ್, ಎಸ್.ಪ್ರಜ್ವಲ್, ಗ್ರಾಪಂ ಸದಸ್ಯ ರಾಜಪ್ಪ ಇದ್ದರು.